ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ, ಮತ್ತಿಬ್ಬರು ಆರೋಪಿಗಳ ಬಂಧನ
ಉಡುಪಿ, ಆಗಸ್ಟ್ 11 : ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಭಾಸ್ಕರ್ ಶೆಟ್ಟಿ ಪತ್ನಿ, ಪುತ್ರ ಸೇರಿ ಒಟ್ಟು ಐವರು ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ.
ಈ ಕೊಲೆ ಪ್ರಕರಣದ 3 ನೇ ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಅವರ ತಂದೆ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ರಾಘವೇಂದ್ರನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಭಾಸ್ಕರ ಶೆಟ್ಟಿ ಕೊಲೆಗೆ ಸಹಾಯ ಮಾಡಿದ ಆರೋಪ ಈ ಇಬ್ಬರು ಆರೋಪಿಗಳ ಮೇಲಿದೆ.[ಜ್ಯೋತಿಷಿ ನಿರಂಜನ್ ಭಟ್ ಆತ್ಮಹತ್ಯೆಗೆ ಯತ್ನ]
ಜ್ಯೋತಿಷಿ ನಿರಂಜನ್ ಭಟ್ ಅವರನ್ನು ಆ.8ರ ಸೋಮವಾರ ರಾತ್ರಿ ಮಣಿಪಾಲ ಪೊಲೀಸರು ಭಟ್ಕಳ ಸಮೀಪ ಬಂಧಿಸಿದ್ದರು. ಮಣಿಪಾಲ ಠಾಣೆಗೆ ಕರೆತಂದು ಅವರ ವಿಚಾರಣೆ ನಡೆಸಲಾಗುತ್ತಿತ್ತು. ಪೊಲೀಸರ ವಶದಲ್ಲಿರುವಾಗಲೇ ನಿರಂಜನ್ ಭಟ್ ವಜ್ರದ ಉಂಗುರ ನುಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಸದ್ಯ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.[ಪತಿಯನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟಳೇ ಪತ್ನಿ]
ಸಾಕ್ಷಿ ನಾಶಪಡಿಸಿದ್ದಾರೆ : ಶ್ರೀನಿವಾಸ ಭಟ್ ಮತ್ತು ರಾಘವೇಂದ್ರ ಅವರ ಮೇಲೆ ಕೊಲೆ ಪ್ರಕರಣದ ಸಾಕ್ಷಿಗಳನ್ನು ನಾಶಪಡಿಸಿದ ಆರೋಪವಿದೆ. ನಿರಂಜನ್ ಭಟ್ ಭಾಸ್ಕರ ಶೆಟ್ಟಿ ಅವರ ಮೂಳೆಗಳನ್ನು ನದಿಗೆ ಎಸೆಯುವಾಗ ರಾಘವೇಂದ್ರ ಅವರು ಜೊತೆಗಿದ್ದರು. ಹೋಮಕುಂಡದಲ್ಲಿ ಭಾಸ್ಕರ ಶೆಟ್ಟಿ ಅವರ ಶವವನ್ನು ಸುಡಲು ಶ್ರೀನಿವಾಸ ಭಟ್ ಸಹಾಯ ಮಾಡಿದ್ದಾರೆ ಎಂಬ ಆರೋಪವಿದೆ.
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಂತೆ ಇದುವರೆಗೂ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್, ಜ್ಯೋತಿಷಿ ನಿರಂಜನ್ ಭಟ್, ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್, ಕಾರು ಚಾಲಕ ರಾಘವೇಂದ್ರನನ್ನು ಬಂಧಿಸಲಾಗಿದೆ.