ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ರಾಜೇಶ್ವರಿ ಜಾಮೀನು ಅರ್ಜಿ ತಿರಸ್ಕೃತ
ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ರಾಜೇಶ್ವರಿ ಶೆಟ್ಟಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಉಡುಪಿ, ಏಪ್ರಿಲ್ 14 : ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಆರೋಪಿ ರಾಜೇಶ್ವರಿ ಶೆಟ್ಟಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಕೊಲೆಯಾದ ಭಾಸ್ಕರ ಶೆಟ್ಟಿ ಪತ್ನಿ , ಕೊಲೆ ಆರೋಪಿಯೂ ಆಗಿರುವ ರಾಜೇಶ್ವರಿ ಶೆಟ್ಟಿ ಅವರು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೆಲ ದಿನಗಳ ಹಿಂದೆಯೇ ಪೂರ್ಣಗೊಂಡಿದ್ದು, ಗುರುವಾರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿ ಆದೇಶ ನೀಡಿದೆ.[ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ]
ಉದ್ಯಮಿಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು ಮಹಿಳೆ ಎಂಬ ಕಾರಣಕ್ಕಾಗಿ ಜಾಮೀನು ನೀಡಿದ್ದರೆ, ಆರೋಪಿಯು ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆ ಇತ್ತು. ಆರೋಪ ಸ್ಥಾನದಲ್ಲಿರುವಾಗ ಮಹಿಳೆ ಎಂದು ರಿಲೀಫ್ ನೀಡುವ ಅಗತ್ಯ ಇಲ್ಲ ಎಂಬುದನ್ನು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಘಟನೆ ವಿವರ: ಹೊರ ದೇಶಗಳಲ್ಲಿ ದೊಡ್ಡ ಉದ್ಯಮಿ ಆಗಿದ್ದ ಭಾಸ್ಕರ್ ಶೆಟ್ಟಿ ಅವರ ಹಳ್ಳಿಯಾದ ಇಂದ್ರಾಲಿಯಲ್ಲಿರುವ ನಿವಾಸದಿಂದ ನಾಪತ್ತೆಯಾಗಿದ್ದರು.
ನಾಪತ್ತೆ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು ಹಲವು ದಿನಗಳ ಕಾಲ ಮಾಹಿತಿಕಲೆ ಹಾಕಿದ ವೇಳೆ ಪ್ರಕರಣಕ್ಕೆ ಹೊಸ ತಿರುವು ಕಾಣಿಸಿಕೊಂಡಿದ್ದು, ಅಚ್ಚರಿಯ ಅಂಶಗಳೂ ಗೋಚರಿಸಿದ್ದವು.
ಈ ಹಿನ್ನಲೆಯಲ್ಲಿ ಉದ್ಯಮಿಯ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಆಕೆಯ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಆರಂಭದಲ್ಲಿ ಸಬೂಬು ಹೇಳಿದ್ದ ಉದ್ಯಮಿಯ ಪತ್ನಿ ಹಾಗೂ ಪುತ್ರ ನಂತರದಲ್ಲಿ ತಾವೇ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದರು.