'ಭಾಸ್ಕರ್ ಶೆಟ್ಟಿ ಅವರ ಜೊತೆ ಯಾವುದೇ ವ್ಯವಹಾರ ಇರಲಿಲ್ಲ'
ಉಡುಪಿ, ಆಗಸ್ಟ್ 19 : 'ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಅವರ ಕುಟುಂಬದ ಜೊತೆ ನಾನು ಯಾವುದೇ ವ್ಯವಹಾರದ ಪಾಲುದಾರಿಕೆ ಹೊಂದಿಲ್ಲ. ವಿನಾಕಾರಣ ನನ್ನ ಹೆಸರು ತಳಕು ಹಾಕಲಾಗುತ್ತಿದೆ' ಎಂದು ಡಿ.ಭಾಸ್ಕರ ಶೆಟ್ಟಿ ಹೇಳಿದ್ದಾರೆ.
ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಅವರ ಸಹೋದರಿಯ ಪತಿ ಡಿ.ಭಾಸ್ಕರ ಶೆಟ್ಟಿ ಅವರು ಗುರುವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ನಲ್ಲಿ ನಾನೂ ಒಬ್ಬ ಪಾಲುದಾರನಾಗಿದ್ದೆ. 2012ರಲ್ಲಿ ಹಣ ಪಡೆದು ಹೊರಬಂದೆ. ಅಲ್ಲಿಂದ ಅವರ ಜೊತೆ ಯಾವುದೇ ವ್ಯವಹಾರ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು.[ಭಾಸ್ಕರ್ ಶೆಟ್ಟಿ ಹತ್ಯೆ, 2 ಕೋಟಿ ಹಣ ವರ್ಗಾವಣೆ ಬಗ್ಗೆ ತನಿಖೆ]
'ಹತ್ಯೆಯಾಗಿರುವ ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಶೆಟ್ಟಿ ಮತ್ತು ಅವರ ಸಂಬಂಧಿಕರು ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು. ನಾನು ಪ್ರತ್ಯೇಕವಾಗಿ ವ್ಯವಹಾರ ನಡೆಸಿಕೊಂಡು ಹೋಗುತ್ತಿದ್ದೇನೆ' ಎಂದರು.[ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಹೊಸ ತಿರುವು]
'ಭಾಸ್ಕರ ಶೆಟ್ಟಿ ಅವರಿಗೆ 300 ಕೋಟಿ ಆಸ್ತಿ ಇದೆ ಎಂಬ ವರದಿಗಳಲ್ಲಿ ಸತ್ಯಾಂಶವಿಲ್ಲ. ಸೌದಿ ಅರೇಬಿಯಾದಲ್ಲಿ ಅವರು ಸೂಪರ್ ಮಾರ್ಕೆಟ್ ನಡೆಸುತ್ತಿದ್ದರು. ಅಲ್ಲಿ ಅವರಿಗೆ ಯಾವುದೇ ಆಸ್ತಿ ಇಲ್ಲ. ಉಡುಪಿಯಲ್ಲಿ ಹಲವು ಆಸ್ತಿಗಳಿವೆ. 6 ಕೋಟಿ ಸಾಲವೂ ಇದೆ. ಭಾಸ್ಕರ್ ಶೆಟ್ಟಿ ಮತ್ತು ರಾಜೇಶ್ವರಿ ಇಬ್ಬರೂ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ಮಾಲೀಕರಾಗಿದ್ದಾರೆ' ಎಂದು ಹೇಳಿದರು.[ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ]
ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು : 'ವ್ಯವಹಾರದಿಂದ ನಾವು ದೂರವಾಗಿದ್ದರೂ ಭಾಸ್ಕರ್ ಶೆಟ್ಟಿ ಜತೆಗೆ ನನ್ನ ಸಂಬಂಧ ಚೆನ್ನಾಗಿತ್ತು. ಹಲವು ವರ್ಷಗಳಿಂದ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಪತಿ ಹಾಗೂ ಪತ್ನಿಗೆ ಪರಸ್ಪರ ಅನುಮಾನವಿತ್ತು' ಎಂದು ಡಿ.ಭಾಸ್ಕರ ಶೆಟ್ಟಿ ಹೇಳಿದ್ದಾರೆ.
'ರಾಜೇಶ್ವರಿ ಅವರಿಗೆ ಹೋಮ, ಜ್ಯೋತಿಷ್ಯ ಮುಂತಾದವುಗಳಲ್ಲಿ ಹೆಚ್ಚು ನಂಬಿಕೆ ಇತ್ತು. ಕೆಲವೊಮ್ಮೆ ದಿನಪೂರ್ತಿ ಪೂಜೆ ಮಾಡುತ್ತಿದ್ದರು. ಧ್ಯಾನ ಮಾಡುತ್ತಿದ್ದರು. ಭಾಸ್ಕರ್ ಶೆಟ್ಟಿ ನರ್ಸ್ ಜೊತೆ ವಿವಾಹವಾಗಿದ್ದರು ಎಂಬ ಬಗ್ಗೆ ತಮಗೆ ಏನೂ ತಿಳಿದಿಲ್ಲ' ಎಂದು ಡಿ.ಭಾಸ್ಕರ ಶೆಟ್ಟಿ ಸ್ಪಷ್ಟಪಡಿಸಿದರು.