ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ
ಉಡುಪಿ, ಆಗಸ್ಟ್ 16: ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಅವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಲಭ್ಯ ಮಾಹಿತಿಗಳ ಪ್ರಕಾರ ನಿರಂಜನ್ ಕೆಲವೊಂದು ಭಯಾನಕ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ನೀಡುತ್ತಿರುವ ಹೇಳಿಕೆಗಳಿಂದಾಗಿ ಕೇಸ್ ಹೊಸ ತಿರುವು ಪಡೆಯುತ್ತಿದೆ. ಶನಿವಾರ (ಆ 13) ಉಡುಪಿ ಪೊಲೀಸರು ನಿರಂಜನ್ ಭಟ್ ನನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ ವಿಚಾರಣೆಗೊಳಪಡಿಸಿ, ಡಿಎನ್ಎ ಸ್ಯಾಂಪಲ್ ಪಡೆದುಕೊಂಡಿದ್ದಾರೆ. (ಭಾಸ್ಕರ ಶೆಟ್ಟಿ ಕೊಲೆ, ಪೊಲೀಸರ ಅವಾಂತರ)
ವಿಚಾರಣೆಯ ವೇಳೆ ಜ್ಯೋತಿಷಿ ನಿರಂಜನ್ ಭಟ್, ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಯಾವ ರೀತಿ ಅಮಾನುಷವಾಗಿ ಹತ್ಯೆಗೈಯ್ಯಲಾಯಿತು ಎನ್ನುವುದರ ಬಗ್ಗೆ ಹೇಳಿಕೆಯನ್ನು ನೀಡಿದ್ದಾನೆ.
ಹೋಮ ಕುಂಡದಲ್ಲಿ ಭಾಸ್ಕರ ಶೆಟ್ಟಿ ಶವವನ್ನು ಸುಟ್ಟು, ಶವದ ಉಳಿದ ಭಾಗವನ್ನು ಜಿಲ್ಲೆಯ ಮೂರು ನದಿಗಳಲ್ಲಿ ಬಿಸಾಕಿದ್ದೇನೆ ಎಂದು ಪೊಲೀಸರ ಮುಂದೆ ನಿರಂಜನ್ ಭಟ್ ಒಪ್ಪಿಕೊಂಡಿದ್ದಾನೆ ಎನ್ನುವ ಸುದ್ದಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಭಾಸ್ಕರ ಶೆಟ್ಟಿ ಕುಟುಂಬದಲ್ಲಿ ಬಿರುಗಾಳಿ ಉಂಟಾಗಲು ಕಾರಣವಾಗಿದ್ದು ಆರ್ಥಿಕ ಅವ್ಯವಹಾರ ಒಂದೆಡೆಯಾದರೆ, ಇನ್ನೊಂದು ಪ್ರಮುಖ ಕಾರಣ ನಿರಂಜನ್ ಭಟ್.
ಮಾಟಮಂತ್ರದ ಹೆಸರಿನಲ್ಲಿ ಶೆಟ್ಟಿ ಪತ್ನಿಯನ್ನು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತಿದ್ದದ್ದು ಭಾಸ್ಕರ ಶೆಟ್ಟಿ ಸಂಸಾರದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣವಾಗಿತ್ತು. (ಭಾಸ್ಕರ ಶೆಟ್ಟಿ ಗಂಡನಂತೆ ಎಲ್ಲಿದ್ದ)
ಭಾಸ್ಕರ ಶೆಟ್ಟಿ ಅತ್ತೆಯ ಹೇಳಿಕೆ: ನನ್ನ ಮಗಳು ಕೊಲೆ ಮಾಡಿದ್ದು ಇನ್ನೂ ದೃಢಪಟ್ಟಿಲ್ಲ. ಒಂದು ವೇಳೆ ತನ್ನ ರಕ್ಷಣೆಗಾಗಿ ಆಕೆ ಕೊಲೆ ಮಾಡಿದ್ದರೂ, ಗಂಡನ ಅಂತ್ಯ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡಿದ್ದಾಳೆ.
ಮಗನ ಕೈಯಲ್ಲೇ ಬೆಂಕಿ ಕೊಡಿಸುವ ಮೂಲಕ ಅಂತ್ಯ ಸಂಸ್ಕಾರ ಮುಗಿಸಿದ್ದಾಳೆಂದು ಶೆಟ್ಟಿಯವರ ಅತ್ತೆ ಸುಮತಿ, ಮಗಳ ಪರವಾಗಿ ಹೇಳಿಕೆಯನ್ನು ನೀಡಿದ್ದಾರೆ.
ಭಾಸ್ಕರ ಶೆಟ್ಟಿ ಕೊಲೆಯಲ್ಲಿ ಅವರ ಬಾವ ಮತ್ತು ಪತ್ನಿ ಕುಟುಂಬದವರೂ ಶಾಮೀಲಾಗಿದ್ದಾರಾ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ
ಭಾಸ್ಕರ ಶೆಟ್ಟಿ ತಾಯಿಯ ಪ್ರಶ್ನೆಗೆ ಉತ್ತರಿಸುವವರಾರು?
ನನ್ನ ಮಗ ಬದುಕಿದ್ದಾನೋ, ಇಲ್ಲವೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವನ ಅಂತ್ಯಕ್ರಿಯೆ ನಡೆಸುವುದಾದರೂ ಹೇಗೆ. ಅವನು ಬದುಕಿದ್ದರೆ ಮನೆಗೆ ಬರಲಿ, ಸತ್ತಿದ್ದರೆ ಕೊಂದವರಿಗೆ ನನ್ನ ಮುಂದೆಯೇ ಶಿಕ್ಷೆಯಾಗಲಿ ಎಂದು ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ, ಧೂಮಾವತಿ ಮತ್ತು ಪಂಜುರ್ಲಿ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶೋಭಾ ಕರಂದ್ಲಾಜೆಗೆ ಪತ್ರ
ನನ್ನ ಮಗನ ಸಾವಿನಲ್ಲಿ ಸೊಸೆ, ಮೊಮ್ಮಗ, ಭಟ್ಟ ಜೊತೆಗೆ ಸೊಸೆಯ ಸಹೋದರ ಭಾಸ್ಕರ ಶೆಟ್ಟಿ ಮತ್ತು ಸೊಸೆಯ ಸಂಬಂಧಿ ಬಾಲಕೃಷ್ಣ ಶೆಟ್ಟಿ ಕೂಡಾ ಶಾಮೀಲಾಗಿದ್ದಾರೆ. ಇವರಿಬ್ಬರನ್ನೂ ಪೊಲೀಸರು ವಿಚಾರಿಸಲಿ ಎಂದು ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಲ್ಲಿ ಪತ್ರ ಮುಖೇನ ಮನವಿ ಮಾಡಿದ್ದಾರೆ.
ನಿರಂಜನ್ ಭಟ್
ಭಾಸ್ಕರ ಶೆಟ್ಟಿಯವರ ಅಳಿದುಳಿದ ಭಾಗವನ್ನು ನಂದಳಿಕೆಯ ಪಳ್ಳಿ ನದಿ, ಹತ್ಯೆಗೆ ಬಳಸಿದ ವಸ್ತುಗಳನ್ನು ಕಡಂದಳೆ ಸಮೀಪದ ನದಿಯಲ್ಲಿ ಮತ್ತು ಹೋಮ ಕುಂಡದ ಇಟ್ಟಿಗೆಗಳನ್ನು ಸಮೀಪದ ಇನ್ನೊಂದು ನದಿಯಲ್ಲಿ ಬಿಸಾಕಿರುವುದನ್ನು ನಿರಂಜನ್ ಭಟ್ ಒಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿಯಿದೆ.
ಪ್ರಳಯಾಂತಕ ನಿರಂಜನ್ ಭಟ್
ಐಷಾರಾಮಿ ಬದುಕಿನ ದಾಸನಾಗಿದ್ದ ನಿರಂಜನ್ ಭಟ್ ಬಂಧನವಾದ ನಂತರ ಕೈಯುಂಗರವನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈತ ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿಯ ಆರ್ಥಿಕ ಸಹಾಯದೊಂದಿಗೆ ಜಿಮ್ ಕೂಡಾ ನಡೆಸುತ್ತಿದ್ದ.
ಪೊಲೀಸರ ಮೇಲೆ ವಕೀಲರ ಆರೋಪ
ಪೊಲೀಸರು ನಿಜವಾದ ಅಪರಾಧಿಗಳನ್ನು ಹುಡುಕುವ ಪ್ರಯತ್ನವನ್ನು ಮಾಡಲೇ ಇಲ್ಲ. ಪ್ರಕರಣವೊಂದನ್ನು ಒಬ್ಬ ಪೊಲೀಸ್ ಅಧಿಕಾರಿ ಎಷ್ಟು ಹಾಳು ಮಾಡಬಹುದೋ ಅಷ್ಟು ಹಾಳು ಮಾಡಿದ್ದಾರೆಂದು ಮಣಿಪಾಲ ವೃತ್ತ ನಿರೀಕ್ಷಕ ಗಿರೀಶ್ ವಿರುದ್ದ ಹಿರಿಯ ವಕೀಲ ಎಂ. ಶಾಂತಾರಾಮ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ತನಿಖೆಯ ಬಗ್ಗೆ ಅನುಮಾನ ಬೇಡ
ಭಾಸ್ಕರ ಶೆಟ್ಟಿ ಹತ್ಯೆಯ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ, ಈ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಬೇಡ. ತನಿಖೆಯ ವೇಳೆ ಮಹತ್ವದ ಅಂಶಗಳು ಲಭ್ಯವಾಗಿವೆ, ಈಗಲೇ ಅದನ್ನು ಸಾರ್ವಜನಿಕ ಪಡಿಸಲು ಸಾಧ್ಯವಿಲ್ಲ. ಆರೋಪಿಗಳ ರಕ್ಷಣೆ ಮಾಡಲಾಗುವುದಿಲ್ಲ ಎಂದು ಉಡುಪಿ ಎಸ್ಪಿ ಕೆ ಟಿ ಬಾಲಕೃಷ್ಣ ಹೇಳಿದ್ದಾರೆ.
ಪಿಎಸೈ ವಿರುದ್ದ ಆಂತರಿಕ ತನಿಖೆ
ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಣಿಪಾಲದ ವೃತ್ತ ನಿರೀಕ್ಷಿಕ ಗಿರೀಶ್ ವಿರುದ್ದ ಆರೋಪಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅವರ ವಿರುದ್ದ ಆಂತರಿಕ ತನಿಖೆ ಆರಂಭವಾಗಿದೆ. ಅವರು ತಪ್ಪಿತಸ್ಥರಾಗಿದ್ದರೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಕೆ ಟಿ ಬಾಲಕೃಷ್ಣ ಹೇಳಿದ್ದಾರೆ.