ಕೊಲೆ ಬೆದರಿಕೆ ದೂರು ದಾಖಲಿಸಿದ ಉದ್ಯಮಿ ಭಾಸ್ಕರ್ ಶೆಟ್ಟಿ ತಾಯಿ
ಉಡುಪಿ/ಮಂಗಳೂರು, ಅಕ್ಟೋಬರ್ 15: ಜುಲೈ 28ರಂದು ಕೊಲೆಯಾದ ಉದ್ಯಮಿ ಕೆ. ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಶೆಟ್ಟಿ ಅವರಿಗೆ ಸೊಸೆ ರಾಜೇಶ್ವರಿ ಶೆಟ್ಟಿ, ಸಹೋದರಿಯರಾದ ರೇಣುಕಾ ಶೆಟ್ಟಿ, ರೂಪಾ ಡಿ ಶೆಟ್ಟಿ ಹಾಗೂ ಅವರ ತಾಯಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುಲಾಬಿ ಶೆಟ್ಟಿ, ಮಗಳು ಹೇಮಲತಾ ಅವರು ಭಾಸ್ಕರ್ ಶೆಟ್ಟಿಯವರಿಗೆ ಸೇರಿದ ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್ ನಲ್ಲಿ ಇರುವಾಗ ರಾಜೇಶ್ವರಿ ಶೆಟ್ಟಿ ಅವರ ಸಹೋದರಿಯರಿಬ್ಬರು ಬಂದು, ಜೀವ ಬೆದರಿಕೆ ಹಾಕಿದ್ದರು.[ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಹೊಸ ತಿರುವು]
ಅ.13ರಂದು ರಾಜೇಶ್ವರಿ ಶೆಟ್ಟಿ ಅವರ ತಾಯಿ ಸುಮತಿ ಶೆಟ್ಟಿಯವರು ದುರ್ಗಾ ಹೋಟೆಲ್ನ ವ್ಯವಸ್ಥಾಪಕ ಬಾಲಕೃಷ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಂಚ ಕೇಳಿದ ಸರ್ಕಲ್ ಇನ್ ಸ್ಪೆಕ್ಟರ್ ಅಮಾನತು: ಫೇಸ್ಬುಕ್ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು 20 ಸಾವಿರ ರುಪಾಯಿ ಲಂಚ ಕೇಳಿದ ಆರೋಪದಡಿ ಬೆಳ್ತಂಗಡಿ ಸರ್ಕಲ್ ಇನ್ ಸ್ಪೆಕ್ಟರ್ ನೇಮಿರಾಜ್ ಅವರನ್ನು ಅಮಾನತುಗೊಳಿಸಲು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಆದೇಶ ಹೊರಡಿಸಿದ್ದಾರೆ.
ಧನಕೀರ್ತಿ ಅರಿಗ ಅವರು ಈ ಪ್ರಕರಣದ ದೂರುದಾರರು. ಧರ್ಮಸ್ಥಳದ ಧನಕೀರ್ತಿ ಅರಿಗ ಎಂಬುವರ ಮಗ ಅಭಿಷೇಕ್ ಫೇಸ್ಬುಕ್ ಪ್ರಕರಣವೊಂದಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಇನ್ ಸ್ಪೆಕ್ಟರ್ ನೇಮಿರಾಜ್ ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸತ್ಯಾಂಶ ತಿಳಿಯಲು ಬಂಟ್ವಾಳ ಡಿವೈಎಸ್ಪಿ ರವೀಶ್ ಅವರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿತ್ತು.[ಐದು ಸಾವಿರಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದ ಚಿತ್ತಾಪುರದ ನಿಂಗಮ್ಮ]
ಪರಿಶೀಲನೆ ನಡೆಸಿದ ಡಿವೈಎಸ್ಪಿ ರವೀಶ್ ಅವರು ವರದಿಯನ್ನು ನೀಡಿದ್ದರು. ಲಂಚ ಕೇಳಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ಅವರು ನೇಮಿರಾಜ್ ನನ್ನು ಕರ್ತವ್ಯದಿಂದ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.