ಶಿವರಾಮ ಆಚಾರ್ಯ ಮನೆ ಮೇಲೆ ಎಸಿಬಿ ದಾಳಿ, ಕೋಟಿ-ಕೋಟಿ ಆಸ್ತಿ ಪತ್ತೆ
ಉಡುಪಿ, ಮಾರ್ಚ್. 09 : ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ಕೊಲ್ಲೂರು ವನ್ಯಜೀವಿ ವಿಭಾಗದ ರೇಂಜರ್ ಶಿವರಾಮ ಆಚಾರ್ಯ ಅವರ ಮನೆ ಮತ್ತು ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಡಿವೈಎಸ್ಪಿ ಅರುಣ್ ಕುಮಾರ್ ಕೊಲ್ಲೂರು ನೇತೃತ್ವದ ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್ಸ್ ಪೆಕ್ಟರ್ ಯೋಗಿಶ್ ಕುಮಾರ್, ಇನ್ಸ್ ಪೆಕ್ಟರ್ ಸತೀಶ್, ಇನ್ಸ್ ಪೆಕ್ಟರ್ ದಿನಕರ್ ಶೆಟ್ಟಿ ಸೇರಿ ಮೂವತ್ತು ಅಧಿಕಾರಿಗಳ ತಂಡ ಏಕಕಾಲಕ್ಕೆ ಉಡುಪಿಯ ಕುಂಬದಕೋಣೆ, ಅಜ್ರಿಯಲ್ಲಿರುವ ಮನೆ, ಕಚೇರಿ ಸೇರಿ ಮಂಗಳೂರಿನಲ್ಲಿರುವ ಶಿವರಾಮರ ನಿಕಟವರ್ತಿಗಳು ಹಾಗೂ ಸಂಬಂಧಿಗಳ ಮನೆ ಮೇಲೂ ದಾಳಿ ಮಾಡಿದ್ದಾರೆ.
ದಾಳಿ ವೇಳೆ 10.08 ಲಕ್ಷ ಮೌಲ್ಯದ ಚಿನ್ನ, 8.63 ಲಕ್ಷ ನಗದು ಹಣ, 1 ಮಾರುತಿ ಸ್ವಿಫ್ಟ್, 1 ಮಾರುತಿ 800 ಕಾರು, ಸುಮಾರು 70 ಲಕ್ಷ ರು ಮೌಲ್ಯದ ಮನೆ, ಅಲ್ಲದೇ 70 ಲಕ್ಷ ಮೌಲ್ಯದ ಮನೆ, ನಾಗುರಿಯಲ್ಲಿ ಹತ್ತು ಸೆಂಟ್ಸ್ ಜಾಗ, ಉಡುಪಿಯ ಅಜ್ರಿಯಲ್ಲಿ 27 ಸೆಂಟ್ಸ್ ಜಾಗ ಹಾಗೂ ಎರಡು ಕಟ್ಟಡ, ಹತ್ತು ಬ್ಯಾಂಕ್ ಖಾತೆ ಇರುವುದು ಪತ್ತೆಯಾಗಿದೆ.
ಆಚಾರ್ಯ ಅವರ ಪತ್ನಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.