ಮೃತ ಹರೀಶ್ ಕುಟುಂಬಕ್ಕೆ ಜಮೀರ್ ಹಣ ಸಹಾಯ
ತುಮಕೂರು, ಫೆಬ್ರವರಿ 17 : ತುಮಕೂರು ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ದೇಹ ಎರಡು ತುಂಡಾದರೂ ಸಮಯಪ್ರಜ್ಞೆ ಮರೆಯದೆ, ತನ್ನ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಯುವಕ ಹರೀಶ್ ಕೊಡುಗೆಗೆ ಬೆಲೆ ಕಟ್ಟಲಾಗದು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆರೆಗೋಡನಹಳ್ಳಿಯಲ್ಲಿರುವ ಹರೀಶ್ ಮನೆಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಬುಧವಾರ ಭೇಟಿ ನೀಡಿ 5 ಲಕ್ಷ ರು. ನೀಡಿ, ದುಃಖತಪ್ತ ಕುಟುಂಬವನ್ನು ಸಂತೈಸಿದರು. [ದೇಹ ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]
ಅಲ್ಲದೆ, ಮೃತ ಹರೀಶ್ ನ ಅಣ್ಣನ ಮದುವೆಯ ಖರ್ಚು ಮತ್ತು ಮನೆ ಕಟ್ಟಲು ಸಹಾಯ ಮಾಡುತ್ತೇನೆಂದು ಹರೀಶ್ ನ ತಾಯಿ ಗೀತಮ್ಮ ಅವರಿಗೆ ಜಮೀರ್ ಭರವಸೆ ನೀಡಿದರು. ಹರೀಶ್ ಅವರ ತಂದೆ 15 ವರ್ಷಗಳ ಹಿಂದೆ ಮೃತಪಟ್ಟಿದ್ದು, ಕುಟುಂಬವನ್ನು ಸಾಗಿಸಲು ಹರೀಶ್ ನ ಹಿರಿಯ ಸಹೋದರ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದಾರೆ.
ಮಂಗಳವಾರ ಊರಿನಿಂದ ಬೆಂಗಳೂರಿಗೆ ಬರುತ್ತಿರುವಾಗ ತಿಪ್ಪಗೊಂಡನಹಳ್ಳಿ ಬಳಿ ಅವರ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತನ ದೇಹ ಎರಡು ತುಂಡುಗಳಾಗಿ ರಸ್ತೆ ಮೇಲೆ ಬಿದ್ದಿದ್ದರೂ ನನ್ನ ಕಣ್ಣುಗಳನ್ನು ಬೇರೆಯವರಿಗೆ ನೀಡಿ ಎಂದು ಕೂಗಿಕೊಂಡು ಕೊನೆಗೆ ಮೃತಪಟ್ಟರು ಹರೀಶ್.