ತುಮಕೂರಿನಲ್ಲಿ ಬಿಬಿಎಂಪಿ ಬ್ಯಾಂಕ್ ಖಾತೆ, ಹೊಸ ಹಗರಣ ಎಂದ ಬಿಎಸ್ ವೈ
ತುಮಕೂರಿನ ಬ್ಯಾಂಕ್ ನಲ್ಲಿ ಬಿಬಿಎಂಪಿ ಖಾತೆ ತೆರೆದಿರುವುದು ಯಾಕೆ? ಎಂಬ ಪ್ರಶ್ನೆ ಎತ್ತಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರ ನೀಡುವುದಾಗಿಯೂ ಅವರು ತುಮಕೂರಿನಲ್ಲಿ ಹೇಳಿದ್ದಾರೆ.
ತುಮಕೂರು, ಫೆಬ್ರವರಿ 27: ತುಮಕೂರಿನ ಬೆಳ್ಳಾವಿಯಲ್ಲಿ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಆ ನಂತರ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷದಲ್ಲಿ ಕಾಣದಂಥ ಬರಗಾಲ ರಾಜ್ಯದಲ್ಲಿ ಆವರಿಸಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಹಲವೆಡೆ ನೀರು-ಮೇವು ಒದಗಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎರಡು ಸಲ ಸಾಲ ಮನ್ನಾ ಮಾಡಿದ್ದಿವಿ. ಆಗ ನಾವು ಕೇಂದ್ರದ ಬಳಿ ಏನನ್ನೂ ಕೇಳಲಿಲ್ಲ. ಮುಖ್ಯಮಂತ್ರಿಗಳೇ ಈ ಬಾರಿ ಬಜೆಟ್ ನಲ್ಲಿ ಸಾಲ ಮನ್ನಾ ಮಾಡದಿದ್ದರೆ ಜನ ನಿಮ್ಮನ್ನು ಓಡಾಡಲು ಬಿಡುವುದಿಲ್ಲ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಶನಿ ವಕ್ಕರಿಸಿದಂತೆ ಇದೆ. ಈ ಮಾತನ್ನು ಸ್ವತಃ ಜನಾರ್ದನ ಪೂಜಾರಿ ಹೇಳಿದ್ದಾರೆ. ಮುಂದೆ ಇವರನ್ನು ರಾಜ್ಯದಿಂದ ಕಿತ್ತೊಗೆಯಿರಿ ಎಂದರು.[ಸಿಟ್ಟು, ಪಟ್ಟು ಎರಡರ ಕಾಂಬೋ ಬಿಎಸ್ ವೈಗೆ 74ನೇ ಜನ್ಮದಿನ]
ಸ್ಟೀಲ್ ಬ್ರಿಡ್ಜ್ ನಲ್ಲಿ ಹಣ ಲೂಟಿ ಮಾಡಿದ್ದಾರೆ. ಸಾವಿರಾರು ಕೋಟಿ ರುಪಾಯಿಯನ್ನು ಹೈಕಮಾಂಡ್ ಗೆ ಕೊಟ್ಟಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ನೀವು, ನಿಮ್ಮ ಸಚಿವರು ಜೈಲಿಗೆ ಹೋಗ್ತೀರಾ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.[ತಾಕತ್ತಿದ್ದರೆ ಬಿಜೆಪಿ ಸಿಡಿ ಬಿಡುಗಡೆ ಮಾಡಿ ಹೆಚ್ ಡಿಕೆಗೆ ಪೂಜಾರಿ ಸವಾಲ್]
ಬಿಬಿಎಂಪಿನವರು ತುಮಕೂರು ಬ್ಯಾಂಕ್ ವೊಂದರಲ್ಲಿ ಖಾತೆ ತೆರೆದಿದ್ದಾರೆ. ಆ ಹಗರಣದ ಬಗ್ಗೆ ಇನ್ನೂ ವಿವರಗಳಿವೆ. ಮುಂದಿನ ದಿನಗಳಲ್ಲಿ ಅದನ್ನು ಬಯಲಿಗೆಳೆಯಲಾಗುವುದು ಎಂದು ಅವರು ಹೇಳಿದರು.