ಮಹಿಳಾ ಖೈದಿಗಳಿಂದ ರುಚಿಕಟ್ಟಾದ ಪಫ್ ಬೆಣ್ಣೆ ಬಿಸ್ಕತ್ತು
ತುಮಕೂರು, ಜುಲೈ 6: ತುಮಕೂರು ಜೈಲಿನಲ್ಲಿರುವ ಮಹಿಳಾ ಖೈದಿಗಳು ಇನ್ನುಮೇಲೆ ಬಾಣಸಿಗರಾಗಲಿದ್ದಾರೆ! ಅರ್ಥಾತ್ ಬೇಕರಿ ಉತ್ಪನ್ನಗಳನ್ನು ತಯಾರಿಸಲು ತರಬೇತಿ ಪಡೆಯಲು ಆರಂಭಿಸಿದ್ದಾರೆ.
ಮಹಿಳಾ ಖೈದಿಗಳಿಗೆ ಉದ್ಯೋಗ ತರಬೇತಿ ನೀಡುವ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ದೃಷ್ಟಿಯಿಂದ ತುಮಕೂರಿನ ಜೈಲಿನಲ್ಲಿ ಬೇಕರಿ ಘಟಕವನ್ನು ಸ್ಥಾಪಿಸಲಾಗಿದೆ. ವಿವಿಧ ಅಪರಾಧ ಪ್ರಕರಣಗಳಿಂದ ಜೈಲಿಗೆ ತೆರಳಿದ ಮಹಿಳೆಯರನ್ನು ಬೇರೆ ಕೆಲಸದಲ್ಲಿ ತೊಡಗಿಸಿ, ಅವರ ಮನಸ್ಸನ್ನು ಪರಿವರ್ತಿಸುವ ಉದ್ದೇಶವೂ ಇದರ ಹಿಂದಿದೆ.
New initiative: Our prisoners are now proud bakers. Started bakery classes for women prisoners at Tumkur. New bakery unit at Tumkur jail. pic.twitter.com/Ks1XlO5aMz
— D Roopa IPS (@D_Roopa_IPS) July 5, 2017
ಒಂದಿಲ್ಲೊಂದು ಕ್ರಿಯಾಶೀಲ ಮತ್ತು ಸಮಾಜಮುಖಿ ಕೆಲಸ ಮಾಡುತ್ತಲೇ ಜನಪ್ರಿಯತೆಗಳಿಸಿರುವ ಐಪಿಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯ ಡಿಐಜಿ ಡಿ.ರೂಪಾ ಅವರು ಈ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ.
ಈ ಕುರಿತು 'ಒನ್ಇಂಡಿಯಾ ಕನ್ನಡ'ದೊಡನೆ ಅನಿಸಿಕೆಗಳನ್ನು ಹಂಚಿಕೊಂಡ ಡಿ ರೂಪಾ ಅವರು, 'ತುಮಕೂರಿನಲ್ಲಿರುವ ಏಕೈಕ ಮಹಿಳಾ ಕಾರಾಗೃಹದಲ್ಲಿರುವ 200 ಮಹಿಳಾ ಸಜಾಬಂಧಿಗಳಲ್ಲಿ 21 ಮಹಿಳೆಯರಿಗೆ ಬೇಕರಿ ಉತ್ಪನ್ನಗಳ ತರಬೇತಿ ನೀಡಲಾಗುತ್ತಿದೆ. ಕೈದಿಗಳು ಸದ್ಯಕ್ಕೆ ಪಫ್, ಬೆಣ್ಣೆ ಖಾರ ಬಿಸ್ಕತ್ತುಗಳನ್ನು ತಯಾರಿಸುವುದನ್ನು ಕಲಿಯುತ್ತಿದ್ದಾರೆ' ಎಂದರು.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಕಂಪನಿ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಡಿಯಲ್ಲಿ ಸಲಕರಣೆಗಳನ್ನು ತುಮಕೂರಿನ ಕಾರಾಗೃಹಕ್ಕೆ ಒದಗಿಸಿದ್ದಾರೆ. ಬೇಕರಿ ಉತ್ಪನ್ನಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಕೃಷಿ ವಿಶ್ವವಿದ್ಯಾಲಯ ಒದಗಿಸುತ್ತಿದೆ ಎಂದು ಅವರು ವಿವರಗಳನ್ನು ನೀಡಿದರು.
ಉಳಿದ ಕಾರಾಗೃಹಗಳಿಗೂ ಇದನ್ನು ಏಕೆ ವಿಸ್ತರಿಸಬಾರದು ಎಂಬ ಪ್ರಶ್ನೆಗೆ, ಸದ್ಯಕ್ಕೆ ಸರಕಾರ ಇಂಥ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣಕಾಸು ಒದಗಿಸಿಲ್ಲ. ಆದರೆ ಬಿಎಚ್ಇಎಲ್ ರೀತಿಯಲ್ಲಿ ಇತರ ಕಂಪನಿಗಳು ಸಿಎಸ್ಆರ್ ಅಡಿಯಲ್ಲಿ ಹಣ ಹೂಡಲು ಮುಂದೆ ಬಂದರೆ ಪರಿಗಣಿಸಲಾಗುವುದು ಎಂದು ರೂಪಾ ಅವರು ಉತ್ತರಿಸಿದರು.
ಸದ್ಯಕ್ಕೆ ಈ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗಿಲ್ಲ. ಬದಲಾಗಿ, ಸರಕಾರಿ ಕಚೇರಿಗಳಲ್ಲಿ ನಡೆಸಲಾಗುವ ಸಭೆಗಳಿಗೆ ಪೂರೈಸಲಾಗುತ್ತಿದೆ. ಈ ಉತ್ಪನ್ನಗಳನ್ನು ಸ್ವೀಕರಿಸಲು ಸರಕಾರಿ ಕಚೇರಿಗಳೂ ಒಪ್ಪಿಕೊಂಡಿವೆ. ಬೇಕರಿ ಉತ್ಪನ್ನಗಳ ಪ್ರಮಾಣ ಹೆಚ್ಚುತ್ತಿದ್ದಂತೆ ಅವುಗಳನ್ನು ಮಾರುಕಟ್ಟೆಗೂ ಒದಗಿಸಲಾಗುವುದು ಎಂದು ಅವರು ನುಡಿದರು.
ಈ ತರಬೇತಿಯ ಹಿಂದಿನ ಉದ್ದೇಶವೇನೆಂದರೆ, ಮಹಿಳಾ ಕೈದಿಗಳು ತಮ್ಮ ಶಿಕ್ಷೆಯನ್ನೂ ಪೂರೈಸಿ ಹೊರಗೆ ಬಂದಮೇಲೂ ಸ್ವತಂತ್ರವಾಗಿ ಬೇಕರಿಯನ್ನು ನಡೆಸುವಂತಾಗಬೇಕು ಅಥವಾ ಬೇಕರಿ ಉತ್ಪನ್ನಗಳನ್ನು ಉತ್ಪಾದಿಸುವ ಉದ್ದಿಮೆಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡು ಸ್ವತಂತ್ರವಾಗಿ ಜೀವನ ಸಾಗಿಸುವಂತಾಗಬೇಕು ಎಂದು ರೂಪಾ ಅವರು ತಿಳಿಸಿದರು.
ದಿಟ್ಟ ಪ್ರತಿಭಾವಂತ ಪೊಲೀಸ್ ಅಧಿಕಾರಿ ರೂಪಾ ಮೌದ್ಗೀಲ್
ಇತ್ತೀಚೆಗೆ ತಾನೇ, ಬಡ ಖೈದಿಗಳಿಗೆ ಜೈಲಿನಿಂದ ಉಚಿತ ವಕೀಲರ ನೇಮಕ ಮಾಡಿಸುವ ಸತ್ಕಾರ್ಯ ಆರಂಭಿಸಿದ್ದ ರೂಪಾ ಅವರ ಈ ಹೊಸ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ಕೇಳಿಬರುತ್ತಿದೆ. ಕಳೆದ ತಿಂಗಳಷ್ಟೇ ರಾಜ್ಯದ ಕಾರಾಗೃಹ ಇಲಾಖೆಯ ಪ್ರಥಮ ಮಹಿಳಾ ಡಿಐಜಿ ಆಗಿ ರೂಪಾ ಅವರು ನೇಮಕಗೊಂಡಿದ್ದಾರೆ.