ತುಮಕೂರಿನ ಎಚ್ ಎಂಟಿ 120 ಎಕರೆ ಜಾಗ ಇಸ್ರೋಗೆ?
ಈಗಾಗಲೇ ಮುಚ್ಚಿರುವ ಎಚ್ ಎಂಟಿಯ ತುಮಕೂರು ಘಟಕದ ನೂರಿಪ್ಪತ್ತು ಎಕರೆ ಜಾಗವನ್ನು ಇಸ್ರೋಗೆ ನೀಡಬೇಕು ಎಂದು ಸಂಸದ ಎಸ್ ಪಿ ಮುದ್ದುಹನುಮೇಗೌಡರು ಕೇಂದ್ರ ಹಣಕಾಸು ಸಚಿವ ಅರಣ್ ಜೇಟ್ಲಿ ಅವರಿಗೆ ಮನವಿ ಮಾಡಿದ್ದಾರಂತೆ. ಈ ಬಗ್ಗೆ ಸಂಸದರೇ ಹೇಳಿದ್ದಾರೆ
ತುಮಕೂರು, ಫೆಬ್ರವರಿ 23: ಬೆಂಗಳೂರಿನಿಂದ ತುಮಕೂರಿಗೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕ್ಯಾತ್ಸಂದ್ರ ಬಿಟ್ಟ ನಂತರ ಬಲಭಾಗಕ್ಕೆ ಎಚ್ ಎಂಟಿ ಎಂಬ ದೊಡ್ಡ ಅಕ್ಷರಗಳು ಕಾಣುತ್ತವೆ. ಹೌದು, ಇದು ದೇಶದ ಹೆಮ್ಮೆಯಾಗಿದ್ದ ಎಚ್ ಎಂಟಿ ಕೈಗಡಿಯಾರ ತಯಾರಿಸುತ್ತಿದ್ದ ಕಂಪೆನಿಯ ಜಾಗ. ಆ ಜಾಗವನ್ನು ಕೇಂದ್ರ ಸರಕಾರ ಸ್ವಾಮ್ಯದ ಇಸ್ರೋ, ಐಒಸಿಎಲ್, ಬಿಪಿಸಿಎಲ್, ಬಿಇಎಲ್ ಕಂಪನಿಗಳು ಕೇಳಿವೆಯಂತೆ.
ಆದರೆ, ಇಸ್ರೋದವರಿಗೆ ನೀಡಿ ಎಂದು ಸಂಸದ ಎಸ್.ಪಿ.ಮುದ್ದುಹನುಮೇಗೌಡ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಮನವಿ ಮಾಡಿದ್ದಾರಂತೆ. ಈ ವಿಚಾರವನ್ನು ಸ್ವತಃ ಸಂಸದರೇ ತುಮಕೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ಮಾಡಿ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಚರ್ಚಿಸಿ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ತೀವಿ ಅಂತ ಅರುಣ್ ಜೇಟ್ಲಿಯವರೂ ಹೇಳಿದ್ದಾರಂತೆ.[ಟಿಕ್ ಟಿಕ್ ಓಟವನ್ನು ನಿಲ್ಲಿಸಿದ ತುಮಕೂರಿನ ಎಚ್ಎಂಟಿ!]
ಒಂದು ವೇಳೆ ಎಚ್ ಎಂಟಿ ಜಾಗವನ್ನು ಇಸ್ರೋಗೆ ನೀಡಿದರೆ ತುಮಕೂರಿನಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ತುಮಕೂರಿನ ಹೆಸರು ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಮುದ್ದಹನುಮೇಗೌಡ. ಅಂದಹಾಗೆ, ಎಚ್ ಎಂಟಿಯ ತುಮಕೂರು ಘಟಕ ಈಗಾಗಲೇ ಮುಚ್ಚಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಎಕರೆಗಟ್ಟಲೆ ಸ್ಥಳ ಇದು.[ಕಗ್ಗೆರೆ ತೋಂಟದ ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಮಹಾರಥೋತ್ಸವ]
ಕಾರ್ಖಾನೆ ಮುಚ್ಚಿದ ನಂತರ ಆ ಜಾಗವನ್ನು ಏನು ಮಾಡಬೇಕು ಎಂಬ ಪ್ರಶ್ನೆಗೆ ನಾನಾ ಸಲಹೆಗಳು ಕೇಳಿಬಂದಿದ್ದವು. ಇದೀಗ ಇಸ್ರೋಗೆ ಜಾಗ ನೀಡಿ ಎಂಬ ಮನವಿ ಮಾಡಿದ್ದಾರೆ ಸಂಸದ ಎಸ್ ಪಿಎಂ, ಕೇಂದ್ರ ಸರಕಾರ ಯಾವ ನಿರ್ಧಾರಕ್ಕೆ ಬರುತ್ತದೋ?