ಸಿದ್ದಗಂಗಾ ಮಠಕ್ಕೆ ಗೌರಿ ಶಂಕರ ಸ್ವಾಮೀಜಿ ಭೇಟಿ ಇಲ್ಲ
ತುಮಕೂರು, ಜುಲೈ 21 : ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಗೌರಿ ಶಂಕರ ಸ್ವಾಮೀಜಿಯವರನ್ನು ಭೇಟಿಯಾಗಲು ನಿರಾಕರಿಸಿದರು. ಗೌರಿ ಶಂಕರ ಸ್ವಾಮೀಜಿಯವರು ಗುರುವಾರ ಮಠಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಡಾ.ಶಿವಕುಮಾರ ಸ್ವಾಮೀಜಿ ಅವರು ಗೌರಿ ಶಂಕರ ಸ್ವಾಮೀಜಿಯವರನ್ನು ಇಂದು ಭೇಟಿಯಾಗುವುದಿಲ್ಲ ಎಂದು ಪೊಲೀಸರಿಗೆ ಪತ್ರ ಬರೆದಿದ್ದರು. ಆದ್ದರಿಂದ, ತುಮಕೂರಿಗೆ ಆಗಮಿಸಿದ್ದ ಗೌರಿ ಶಂಕರ ಸ್ವಾಮೀಜಿಯವರು ಅಲ್ಲಿಂದ ವಾಪಸ್ ಆಗಿದ್ದಾರೆ.[ಅಧಿಕಾರ ಹಸ್ತಾಂತರಕ್ಕೆ ಗೌರಿಶಂಕರ ಸ್ವಾಮೀಜಿ ಆಕ್ಷೇಪ]
ಗೌರಿ ಶಂಕರ ಸ್ವಾಮೀಜಿಯವರನ್ನು ಸಿದ್ದಗಂಗಾ ಮಠದಿಂದ ಹೊರಹಾಕಲಾಗಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಅವರು ಡಾ.ಶಿವಕುಮಾರ ಸ್ವಾಮೀಜಿಗಳನ್ನು ಒಂದು ಗಂಟೆಗಳ ಕಾಲ ಭೇಟಿ ಮಾಡಲು ಆದೇಶ ತಂದಿದ್ದರು.[ಲೋಕ ಜಂಗಮ: ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]
ಗೌರಿ ಶಂಕರ ಸ್ವಾಮೀಜಿ ಅವರು ಮಠಕ್ಕೆ ಭೇಟಿ ನೀಡುವಾಗ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು. ನಿಗದಿಯಂತೆ ಗುರುವಾರ ಸ್ವಾಮೀಜಿಗಳು ಮಠಕ್ಕೆ ಭೇಟಿ ನೀಡಬೇಕಿತ್ತು. ಸಿದ್ದಗಂಗಾ ಮಠದ ಭಕ್ತರು ಗೌರಿ ಶಂಕರ ಸ್ವಾಮೀಜಿ ಅವರು ಮಠಕ್ಕೆ ಭೇಟಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.[ಸಿದ್ದಗಂಗಾ ಶ್ರೀ ನಿವೃತ್ತಿ ಘೋಷಣೆ]
ಪತ್ರದಲ್ಲೇನಿದೆ? : ಶಿವಕುಮಾರ ಸ್ವಾಮೀಜಿಗಳು ಕ್ಯಾತ್ಸಂದ್ರ ಪೊಲೀಸರಿಗೆ ಇಂದು ಗೌರಿ ಶಂಕರ ಸ್ವಾಮೀಜಿ ಭೇಟಿ ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದರು. 'ನಿಮ್ಮನ್ನು ಭೇಟಿಯಾಗಲು ನನಗೆ ಇಷ್ಟವಿಲ್ಲ. ನಾನು ಅನಾರೋಗ್ಯದಿಂದ ಇರುವುದರಿಂದ ಮಾನಸಿಕ ತೊಂದರೆಯಾಗುತ್ತದೆ. ಆದ್ದರಿಂದ ಬರುವುದು ಬೇಡ' ಎಂದು ಶ್ರೀಗಳು ಪತ್ರದಲ್ಲಿ ಉಲ್ಲೇಖಿಸಿದ್ದರು.
ತುಮಕೂರಿಗೆ ಬಂದ ಗೌರಿ ಶಂಕರ ಸ್ವಾಮೀಜಿಗಳಿಗೆ ಪೊಲೀಸರು ಈ ಪತ್ರ ತೋರಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಗೌರಿ ಶಂಕರ ಸ್ವಾಮೀಜಿ ಅವರು, 'ಗುರುಗಳ ಆರೋಗ್ಯ ವಿಚಾರಿಸಲು ನಾನು ಬಂದಿದ್ದೆ. ಗುರುಗಳೇ ಬರುವುದು ಬೇಡ ಎಂದು ಹೇಳಿದ ಮೇಲೆ ಬಲವಂತವಾಗಿ ಹೋಗುವುದಿಲ್ಲ. ನಾನು ವಾಪಸ್ ತೆರಳುತ್ತೇನೆ' ಎಂದು ಹೇಳಿದರು.
ಮಠದ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಗೌರಿ ಶಂಕರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಧಿಕಾರ ಹಸ್ತಾಂತರದ ಬಗ್ಗೆ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ಅರ್ಜಿಯ ವಿಚಾರಣೆ ನಡೆಯುತ್ತಿದೆ.