ಕುಡಿಯುವ ನೀರಿಗಾಗಿ ಆಗ್ರಹಿಸಿ ಫೆ.6 ಪಾವಗಡ ಬಂದ್
ತುಮಕೂರು, ಫೆ. 6: ಕುಡಿಯುವ ನೀರಿಗಾಗಿ ಒತ್ತಾಯಿಸಿ ಪಾವಗಡ ತಾಲ್ಲೂಕಿನ ಸಮಗ್ರ ನೀರು ಹೋರಾಟ ವೇದಿಕೆ ಸೇರಿದಂತೆ ಅನೇಕ ಸರ್ಕಾರೇತರ ಸಂಸ್ಥೆಗಳು ಶುಕ್ರವಾರ ಪಾವಗಡ ಬಂದ್ ಆಚರಿಸುತ್ತಿವೆ.
ಎಲ್ಲ ಪಕ್ಷಗಳು, ಸಂಘ ಸಂಸ್ಥೆಗಳ ಮತ್ತು ಧರ್ಮಗಳ ಸಂಘಟಿತ ಜಲಕ್ಕಾಗಿ ಜನ ವೇದಿಕೆ ವತಿಯಿಂದ ಫೆ. 6 ರಂದು ಸ್ವಯಂ ಪ್ರೇರಿತ ಪಾವಗಡ ತಾಲ್ಲೂಕು ಬಂದ್ಗೆ ಕರೆ ನೀಡಲಾಗಿದೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿ ಹೇಳಿದ್ದಾರೆ. [ತುಮಕೂರು : 1 ರೂ.ಗೆ ಶುದ್ಧ ಕುಡಿಯುವ ನೀರು]
ಪ್ಲೋರೈಡ್ ಯುಕ್ತ ನೀರಿನಿಂದಾಗಿ ತಾಲ್ಲೂಕಿನ ಜನತೆ ಹಲ್ಲು, ಕಣ್ಣು, ಜಠರ, ಗರ್ಭಕೋಶ, ಮೂಳೆ ಸಂಬಂಧಿ ತೊಂದರೆಗಳಿಂದ ನರಳುತ್ತಿದ್ದಾರೆ. ಹಾಗಾಗಿ ಸರ್ಕಾರ ಹೇಮಾವತಿ ಅಥವಾ ಭದ್ರಾ ಮೇಲ್ದಂಡೆ ಯೋಜನೆ ಯಾವುದಾದರೂ ಸರಿ ಮೊದಲು ಕಾಮಗಾರಿ ಆರಂಭಿಸಿ ತಾಲ್ಲೂಕಿನ ಜನರಿಗೆ ಒಂದು ಲೋಟ ಕುಡಿಯುವ ನೀರು ಕೊಡುವ ಕೆಲಸವನ್ನು ಮಾಡಬೇಕೆಂದು ಜಪಾನಂದಜಿ ಕೋರಿದರು. [ನೀರಿಗಾಗಿ ಬಿಜೆಪಿ ಯುವಮೋರ್ಚಾ ಪಾದಯಾತ್ರೆ]
ಸ್ವಯಂ ಪ್ರೇರಿತ ಬಂದ್: ತಾಲ್ಲೂಕಿನಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಬಂದ್ನ್ನು ಶಿಸ್ತುಬದ್ದವಾಗಿ ಹಾಗೂ ಶಾಂತಿಯುತವಾಗಿ ನಡೆಸುವಂತೆ ಕೋರಿದ ಅವರು, ಶುಕ್ರವಾರ ಬೆಳಿಗ್ಗೆ 11ಕ್ಕೆ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಪ್ರಾಂಗಣದಿಂದ ಶಾಂತಿಯಾತ್ರೆ ಹೊರಟು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಲಾಗುವುದು ಎಂದರು.
ಪಾವಗಡ ತಾಲ್ಲೂಕಿನ ರಾಜಕೀಯ ಇಚ್ಛಾಶಕ್ತಿಯ ಕೊರತೆ ಸೇರಿದಂತೆ ಇತರೆ ಕಾರಣಗಳಿಂದ ಇಲ್ಲಿನ ಜನರಿಗೆ ಕುಡಿಯಲು ನೀರು ನೀಡಲು ಸಾಧ್ಯವಾಗಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಹಾಗಾಗಿ ಸಾರ್ವಜನಿಕರೆಲ್ಲರೂ ಒಂದಾಗಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಈ ಹೋರಾಟ ನಡೆಸುತ್ತಿರುವುದಾಗಿ ಸ್ವಾಮೀಜಿ ಹೇಳಿದರು. [ಫ್ಲೋರೋಸಿಸ್: ಕುಡಿಯುವ ನೀರಿನ ಬಗ್ಗೆ ಎಚ್ಚರ]
ನೀರಾವರಿ ಹೋರಾಟಗಾರ ಶಿವಪ್ರಸಾದ್ ಮಾತನಾಡಿ, ಮುಂದಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ಹೇಮಾವತಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ತಾಲ್ಲೂಕಿನ ಎಲ್ಲ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕಿದೆ ಎಂದರು. [ದೀಪದ ಕೆಳಗೆ ಕತ್ತಲೆ: ಚಿಕ್ಕಮಗಳೂರಲ್ಲಿ ಜಲ ಅಭಾವ]
ಸೊಗಡು ವೆಂಕಟೇಶ್ ಮಾತನಾಡಿ, ಸರ್ಕಾರ ಪಾವಗಡ ತಾಲ್ಲೂಕಿಗೆ ಶೀಘ್ರವೇ ಕುಡಿಯುವ ನೀರು ನೀಡಲು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೆಲಮಂಗಲ ಸೇರಿದಂತೆ ಇತರೆ ಹೆದ್ದಾರಿಗಳನ್ನು ಬಂದ್ ಮಾಡಿ ರೈಲು ತಡೆ ಚಳವಳಿ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಾಗೂ ಬೆಂಗಳೂರಿನಲ್ಲೂ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.