ಮಹಾಭಾರತದ ಅಭಿಮನ್ಯುವಿನಂತಾಗಿದೆ ಬಿಜೆಪಿ ಅತೃಪ್ತರ ಸ್ಥಿತಿ: ಸೊಗಡು ಶಿವಣ್ಣ
ಬಿಜೆಪಿಯಲ್ಲಿನ ಕೆಲವು ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರ ಹಾಕಿದವರ ಸ್ಥಿತಿ ಮಹಾಭಾರತದಲ್ಲಿನ ಅಭಿಮನ್ಯುವಿನ ರೀತಿ ಆಗಿದೆ ಎಂದು ಹೇಳಿರುವ ಮಾಜಿ ಸಚಿವ ಸೊಗಡು ಶಿವಣ್ನ ಅವರ ಮಾತಿನ ಅರ್ಥ ಏನು?
ತುಮಕೂರು, ಏಪ್ರಿಲ್ 30: ಬಿಜೆಪಿಯ ಆಂತರಿಕ ಬಿಕ್ಕಟ್ಟು ತಕ್ಷಣಕ್ಕೆ ತಮಣಿಯಾಗುವಂತೆ ಕಾಣುತ್ತಿಲ್ಲ. ತುಮಕೂರಿನಲ್ಲಿ ಎಂ.ಬಿ.ನಂದೀಶ್ ಅವರ ಮನೆ ಗೃಹ ಪ್ರವೇಶಕ್ಕೆ ಭಾನುವಾರ ವಿಧಾನಪರಿಷತ್ ವಿಪಕ್ಷ ನಾಯಕ-ಬಿಜೆಪಿಯ ಅತೃಪ್ತರ ಮುಂಚೂಣಿಯಲ್ಲಿರುವ ಕೆಎಸ್ ಈಶ್ವರಪ್ಪ ಭೇಟಿ ನೀಡಿದ್ದಾರೆ.
ಇದೇ ವೇಳೆ ಸಭೆ ನಡೆಸಿದ ಬಗ್ಗೆ ಕೂಡ ಸುದ್ದಿ ಕೇಳಿಬರುತ್ತಿದೆ. ಅದರೆ ಈ ಬಗ್ಗೆ ಮಾಜಿ ಸಚಿವ ಸೊಗಡು ಶಿವಣ್ಣ ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ್ದಾರೆ. " ನಂದೀಶ್ ಅವರ ಮನೆ ಗೃಹಪ್ರವೇಶಕ್ಕಾಗಿ ಈಶ್ವರಪ್ಪನವರು ಬಂದಿದ್ದರು ಬಿಟ್ಟರೆ ಬೇರೆ ಯಾವುದೇ ವಿಶೇಷ ಈ ಭೇಟಿಯಲ್ಲಿಲ್ಲ" ಎಂದಿದ್ದಾರೆ.[ಈಶು-ಯಡ್ಡಿ ಬಣಕ್ಕೆ ಬಿಸಿ ಮುಟ್ಟಿಸಿದ ಮುರಳೀಧರ್ ರಾವ್!]
ಇನ್ನು ಆರೆಸ್ಸೆಸ್ ನ ಸಂತೋಷ್ ಅವರ ಮೇಲೆ ಯಡಿಯೂರಪ್ಪ ಮಾಡಿದ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಮಾರಿಕಣ್ಣು ಹೋತದ ಮೇಲೆ ಅನ್ನೋ ಮಾತಿದೆ. ಹಾಗೆ ಸಂಘಟನೆಯಲ್ಲಿ ತೊಡಗಿಕೊಂಡಿರುವ ಸಂತೋಷ್ ಜೀ ಅವರನ್ನು ಎಳೆದುತಂದಿದ್ದಾರೆ. ಇದೀಗ ಮುರಳೀಧರ ರಾವ್ ಅವರು ವರದಿ ಕಳಿಸುತ್ತಾರೆ. ಆ ನಂತರ ಏನು ಮಾಡಬೇಕು ಎಂಬುದರ ಮೇಲೆ ನಾವು ಮುಂದಿನ ಹೆಜ್ಜೆ ಇಡ್ತೀವಿ ಎಂದರು.[ಯಡಿಯೂರಪ್ಪ ಅವರು ಹೈಕಮಾಂಡ್ ಮಾತು ಕೇಳ್ತಿಲ್ಲ: ಈಶ್ವರಪ್ಪ]
ಈ ಮಧ್ಯೆ ನಮ್ಮ ಇಬ್ಬರು ನಾಯಕರನ್ನು ಹುದ್ದೆಯಿಂದ ತೆಗೆದುಹಾಕಿದ್ದಾರೆ. ಇದು ನಿಜಕ್ಕೂ ದುರದೃಷ್ಟದ ಸಂಗತಿ. ನಮ್ಮ ಸ್ಥಿತಿ ಈಗ ಮಹಾಭಾರತದಲ್ಲಿನ ಅಭಿಮನ್ಯು ಥರ ಆಗಿದೆ. ಇದು ಕಂಪ್ಯೂಟರ್ ಯುಗ. ಇಂಥ ಕಾಲಘಟ್ಟದಲ್ಲೂ ಎಂಥ ಪರಿಸ್ಥಿತಿಯಲ್ಲಿದ್ದೀವಿ ನೋಡಿ ಎಂದು ಮಾತು ಮುಗಿಸಿದರು.