'ನಾನು ಹೇಗೆ ಸಿಎಂ ಆಗಲಿಲ್ಲವೋ ಅದೇ ಥರ ರಾಜಣ್ಣ ಸಚಿವರಾಗಲಿಲ್ಲ'
ನಾನು ಹೇಗೆ ಮುಖ್ಯಮಂತ್ರಿ ಅಗಲಿಲ್ಲವೋ ಅದೇ ರೀತಿ ಕೆಎನ್ ರಾಜಣ್ಣ ಸಚಿವರಾಗಲಿಲ್ಲ ಎಂಬ ಮಾತನಾಡುವ ಮೂಲಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಚ್ಚರಿಗೆ ಕಾರಣರಾಗಿದ್ದಾರೆ. ಸಿಎಂ ಆಪ್ತ ರಾಜಣ್ಣ ಅವರನ್ನು ಹೊಗಳಿ ಮತ್ತೂ ಕುತೂಹಲ ಹುಟ್ಟಿಸಿದ್ದಾರೆ
ಕೊರಟಗೆರೆ, ಏಪ್ರಿಲ್ 11: ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು ಸಹಕಾರಿ ಸಚಿವರಾಗಬೇಕಿತ್ತು. ಆದರೆ ನಾನು ಹೇಗೆ ಮುಖ್ಯಮಂತ್ರಿ ಆಗಲಿಲ್ಲವೋ ಅದೇ ಥರ ರಾಜಣ್ಣ ಸಚಿವರಾಗಲಿಲ್ಲ ಎಂದು ಹೇಳುವ ಮೂಲಕ ಗೃಹ ಸಚಿವ ಡಾ.ಜಿ,ಪರಮೇಶ್ವರ ಅಚ್ಚರಿ ಹುಟ್ಟಿಸಿದ್ದಾರೆ. ಏಕೆಂದರೆ ರಾಜಣ್ಣ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು.
ಅಂಥದ್ದರಲ್ಲಿ ರಾಜಣ್ಣ ಬಗ್ಗೆ ಪರಮೇಶ್ವರ ಆಡಿದ ಮಾತುಗಳು ಆಶ್ಚರ್ಯಕ್ಕೆ ಕಾರಣವಾಗಿವೆ. ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ನ ಹೊಸ ಶಾಖೆ ಉದ್ಘಾಟಿಸಿದ ನಂತರ ಮಾತನಾಡಿದ ಪರಮೇಶ್ವರ್, ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದು, ಸಾವಿಗೀಡಾದ ರೈತರ ಸಾಲ ಮನ್ನಾ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ರಾಜಣ್ಣ ಅಭಿನಂದನೆಗೆ ಅರ್ಹರು ಎಂದಿದ್ದಾರೆ.[ಸಿದ್ದರಾಮಯ್ಯ ರಾಜೀನಾಮೆ ನೀಡ್ಲಿ, ಪರಂ ಸಿಎಂ ಆಗಲಿ: ಪೂಜಾರಿ]
ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ, ಬ್ಯಾಂಕ್ ಕಡೆಯಿಂದ ರೈತರಿಗೆ ಸಾಲ ನೀಡಲು ಇನ್ನೂರು ಕೋಟಿ ರುಪಾಯಿ ಮೀಸಲಿಡಲಾಗಿದೆ. ಏಪ್ರಿಲ್ 13ನೇ ತಾರೀಕು ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೃತ ರೈತರ ಕುಟುಂಬದವರಿಗೆ ಸಾಲ ತೀರುವಳಿ ಪತ್ರ ನೀಡ್ತೀವಿ ಎಂದರು.[ಹಸಿದ ಅನ್ನದಾತರ ಹೊಟ್ಟೆ ತುಂಬಿಸಲಿದೆ ಡಿಸಿಸಿ ಬ್ಯಾಂಕ್: ಕೆಎನ್ನಾರ್]
ಈ ಮಾತೆಲ್ಲ ಏನೇ ಇರಲಿ, ಪರಮೇಶ್ವರ ಅವರು ಹೇಳಿದ "ನಾನು ಹೇಗೆ ಮುಖ್ಯಮಂತ್ರಿ ಆಗಲಿಲ್ಲವೋ ಅದೇ ರೀತಿ ರಾಜಣ್ಣ ಸಚಿವರಾಗಲಿಲ್ಲ" ಅನ್ನೋ ಮಾತು ಮಾತ್ರ ಬಹಳ ಅರ್ಥವನ್ನು ಧ್ವನಿಸುವಂತಿತ್ತು.