ಇತಿಹಾಸ ಪ್ರಸಿದ್ದ ಗೂಳೂರು ಗಣೇಶನಿಗೆ ಪೂಜೆ ಆರಂಭ
ತುಮಕೂರು, ನವೆಂಬರ್ 02- ಇತಿಹಾಸ ಪ್ರಸಿದ್ದ ಗೂಳೂರು ಗಣಪತಿಗೆ ದೀಪಾವಳಿಯಿಂದ ಪೂಜೆ ಶುರುವಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಪ್ರತಿನಿತ್ಯ ಸ್ವಾಮಿಯ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.
ಪುರಾತನ ಇತಿಹಾಸವಿರುವ ಗೂಳೂರು ಗಣಪತಿ ಉತ್ಸವ ನಾಡಿನೆಲ್ಲೆಡೆ ಪ್ರಸಿದ್ದಿ ಹೊಂದಿದೆ. ಸಂಪ್ರದಾಯದಂತೆ ಆಗಸ್ಟ್ ತಿಂಗಳಲ್ಲಿ ಎಲ್ಲೆಡೆ ಗಣಪತಿ ಪ್ರತಿಷ್ಠಾಪನೆ ನಡೆದರೆ, ಅಲ್ಲಿ ಬಾದ್ರಪದ ಚೌತಿಯಿಂದ ಗಣೇಶನ ಪ್ರತಿಮೆ ಮಾಡಲು ಪ್ರಾರಂಭಿಸಲಾಗುತ್ತದೆ.
ಗೂಳೂರು ಕೆರೆಯಿಂದ ಮಣ್ಣು ತಂದು ಹದಗೊಳಿಸಿ ವಿಗ್ರಹ ತಯಾರಿಸಲು ಪ್ರಾರಂಭಿಸಲಾಗುತ್ತದೆ. ವಿಗ್ರಹವನ್ನು ಅನಾದಿಕಾಲದಿಂದಲೂ ಮಾಡಿಕೊಂಡು ಬಂದಿರುವ ವಂಶಸ್ಥ ಕಲಾವಿದರೇ ತಯಾರಿಸುತ್ತಾರೆ. ದೀಪಾವಳಿ ಹಬ್ಬ ಒಂದೆರಡು ದಿನ ಬಾಕಿ ಇರುವಂತೆ ಗಣೇಶ ವಿಗ್ರಹ ನಿರ್ಮಾಣ ಮುಗಿದು ಬಣ್ಣ ಹಚ್ಚುವ ಕಾರ್ಯ ಪ್ರಾರಂಭವಾಗುತ್ತದೆ. ದೀಪಾವಳಿ ಹಬ್ಬದ ದಿನ ಗಣೇಶಮೂರ್ತಿಗೆ ಕಣ್ಣು ಧರಿಸಿ ಪೂಜೆ ಆರಂಭಿಸಲಾಗುತ್ತದೆ. ಇದು ಪುರಾತನ ಕಾಲದಿಂದ ನಡೆದು ಬಂದಿರುವ ಸಂಪ್ರದಾಯ.
ಸಂಪ್ರದಾಯದಂತೆ ದೀಪಾವಳಿಯಿಂದ ಗೂಳೂರು ಗಣಪನ ಪೂಜೆ ಆರಂಭಗೊಂಡಿದ್ದು, ಡಿ. 2ರವರೆಗೆ ನಿತ್ಯ ಪೂಜೆ ನಡೆಯಲಿದೆ. ಪ್ರತಿವರ್ಷದಂತೆ ನಿತ್ಯ ಒಬ್ಬೊಬ್ಬ ಭಕ್ತರು ಪೂಜಾ ಕೈಂಕರ್ಯ ನಡೆಸಿಕೊಂಡು ಬಂದಿದ್ದು ಈ ವರ್ಷವೂ ಅದರಂತೆಯೇ ನಡೆಯಲಿದೆ. ಡಿ.3 ರಂದು ಗಣಪತಿಯವರ ವಿಸರ್ಜನೆ ಪ್ರಾರಂಭಿಸಿ ಡಿ.4 ರಂದು ವಿಸರ್ಜನಾ ಮಹೋತ್ಸವ ಪೂರ್ಣವಾಗುತ್ತದೆ..
ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ದರ್ಶನಕ್ಕೆ ಇರಲಿರುವ ಇತಿಹಾಸ ಪ್ರಸಿದ್ದ ಗೂಳೂರು ಗಣೇಶನನ್ನು ನೋಡಲು ರಾಜ್ಯದ ಎಲ್ಲೆಡೆಯಿಂದ ಆಗಮಿಸುತ್ತಾರೆ. ಜಾತ್ರೆಯಲ್ಲಿ ಅನೇಕ ಭಕ್ತರು ಪಾಲ್ಗೊಂಡು ಗಣೇಶನಲ್ಲಿ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಾರೆ. ಈ ವರ್ಷವೂ ವಿಜೃಂಭಣೆಯಿಂದ ಮಹೋತ್ಸವಗಳು ನೆರವೇರಲಿದ್ದು ಅನೇಕ ಗಣ್ಯರು, ನಾಗರೀಕರು ಭಾಗವಹಿಸಲಿದ್ದಾರೆ.