ಕಾಡಾನೆ ತುಳಿದು ಗುಬ್ಬಿಯ ಇಬ್ಬರು ರೈತರು ಸಾವು
ಕಾಡಾನೆ ದಾಳಿಗೆ ಗುಬ್ಬಿಯ ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಇಂಥ ಸಂದರ್ಭದಲ್ಲಿ ಸ್ಥಳೀಯರ ಆಕ್ರೋಶ ಸಹಜ. ಆನೆ ಸಂಚಾರ ಹೆಚ್ಚಿರುವ ಕಡೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಅರಣ್ಯ ಇಲಾಖೆಯವರು ತಿಳಿಸಬೇಕು.
ಗುಬ್ಬಿ, ಜನವರಿ 9: ಆನೆಗಳು ತುಳಿದು ಇಬ್ಬರು ರೈತರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸೋರೆಕಾಯಿ ಪೆಂಟೆ ಗ್ರಾಮದ ಹೊರವಲಯದಲ್ಲಿ ಭಾನುವಾರ ನಡೆದಿದೆ. ಗಿರಿಯಪ್ಪ (55), ನಾಗರಾಜು (40) ಮೃತರು. ಬಾನುವಾರ ಕುರಿ ಮೇಯಿಸಲು ಹೋಗಿದ್ದ ಇಬ್ಬರು ರಾತ್ರಿಯಾದರೂ ಹಿಂತಿರುಗಿರಲಿಲ್ಲ.
ಗ್ರಾಮದ ಹೊರವಲಯದಲ್ಲಿನ ಜಮೀನಿನ ಅಕ್ಕಪಕ್ಕ ಹುಡುಕಾಡಿದಾಗ ಇಬ್ಬರು ಶವವಾಗಿ ಪತ್ತೆಯಾಗಿದ್ದರು. ಕಳೆದ ಒಂದು ವಾರದಿಂದ ತುಮಕೂರು ಹಾಗೂ ಗುಬ್ಬಿ ತಾಲೂಕಿನ ಸುತ್ತಮುತ್ತ ಆನೆಗಳು ಬೀಡುಬಿಟ್ಟಿರುವ ಸುದ್ದಿ ಹರಿದಾಡುತ್ತಿತ್ತು. ಜತೆಗೆ ಮೂರು ಕಾಡಾನೆಗಳು ಅಲ್ಲಲ್ಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡಿದ್ದವು.[ಕಬಿನಿ ಹಿನ್ನೀರಲ್ಲಿ 4 ಅಡಿ ಉದ್ದದ ದಂತವಿರುವ ದೈತ್ಯ ಗಾತ್ರದ ಆನೆ]
ಎರಡು-ಮೂರು ವರ್ಷಗಳಿಂದ ಗುಬ್ಬಿ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಇದ್ದೇಇದೆ. ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ. ಜಮೀನುಗಳಿಗೆ ಕಾವಲು ಕಾಯಲು ಹೋಗುವಗ, ನೀರು ಹಾಯಿಸಬೇಕು ಎಂದು ತೆರಳುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.[ನೆಲಮಂಗಲ, ಕಾಡಾನೆ ತುಳಿತಕ್ಕೆ ಯುವಕ ಬಲಿ: ಗ್ರಾಮಸ್ಥರ ಆಕ್ರೋಶ]
ಹೀಗೆ ಕೆಲಸ ಮೇಲೆ ತೆರಳುವ ಅಮಾಯಕ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರ ಜೀವಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಜತೆಗೆ ಜನಪ್ರತಿನಿಧಿಗಳೂ ರೈತರ ಸಾವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ನಮ್ಮ ಸಹನೆಗೂ ಒಂದು ಮಿತಿ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.