'ಡಿಕೆಶಿ ಫೋಟೋ ಹಿಡಿದು ತಿರುಗಿದರೆ ದೇಶ ಉದ್ಧಾರ ಆಗುತ್ತಾ?'
ತುಮಕೂರು, ಆಗಸ್ಟ್ 18 : 'ಶಾಲಾ ಮಕ್ಕಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಫೋಟೋ ಹಿಡಿದು ತಿರುಗಿದರೆ ದೇಶ ಉದ್ಧಾರವಾಗುತ್ತದೆಯೇ?' ಎಂದು ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ತಾಯಿ ಗೌರಮ್ಮ ವ್ಯಂಗ್ಯವಾಡಿದರು.
ಗುರುವಾರ ತುಮಕೂರಿನಲ್ಲಿ ಮಾತನಾಡಿದ ಗೌರಮ್ಮ ಅವರು, 'ಆತ್ಮಹತ್ಯೆ ಮಾಡಿಕೊಳ್ಳುವವರು ರಣಹೇಡಿಗಳು' ಎಂಬ ಸಚಿವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 'ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ' ಎಂದರು.[ಮಕ್ಕಳ ನೃತ್ಯವನ್ನು ನಿಲ್ಲಿಸಿದ ಸಚಿವ ಡಿಕೆ ಶಿವಕುಮಾರ್]
ಆಕ್ರೋಶಕ್ಕೆ ಕಾರಣವೇನು? : ಮಂಡ್ಯದಲ್ಲಿ 70ನೇ ಸ್ವಾತಂತ್ರ್ಯೋತ್ಸವದ ವೇಳೆ ಶಾಲಾ ಮಕ್ಕಳ ನೃತ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಅರ್ಧಕ್ಕೆ ನಿಲ್ಲಿಸಿದ್ದರು. ಮಕ್ಕಳು 'ಹುಟ್ಟೋದ್ಯಾಕೆ ..ಸಾಯೋದ್ಯಾಕೆ' ಎಂಬ ಹಾಡಿಗೆ ನೃತ್ಯ ಮಾಡುವುದನ್ನು ತಡೆದಿದ್ದರು.['ನೀನು ಸರ್ಕಾರಿ ಅಧಿಕಾರಿಯಲ್ಲವೇ?' ಡಿಕೆ ರವಿ ತಾಯಿ ಪ್ರಶ್ನೆ]
ನೃತ್ಯ ಮಾಡುವ ಮಕ್ಕಳ ಕೈಯಲ್ಲಿ ಆತ್ಮಹತ್ಯೆಗೆ ಶರಣಾದ ಐಎಎಸ್ ಅಧಿಕಾರಿ ಡಿ.ಕೆ.ರವಿ, ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಮತ್ತು ಎಂ.ಕೆ ಗಣಪತಿ ಅವರ ಫೋಟೋಗಳನ್ನು ನೋಡಿದ್ದ ಸಚಿವರು, ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಲು ಸೂಚನೆ ನೀಡಿದ್ದರು. ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.[ಡಿಕೆ ರವಿ ಪುಣ್ಯತಿಥಿ: ಇಂಥ ದುರ್ಗತಿ ಬೇಡ ಎಂದ ಗೌರಮ್ಮ]
ರಣ ಹೇಡಿಗಳು ಎಂದಿದ್ದರು : ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು ನೃತ್ಯ ನಿಲ್ಲಿಸಿದ್ದ ಬಗ್ಗೆ ಸ್ಪಷ್ಟನೆ ನೀಡಿದ್ದರು. 'ಆತ್ಮಹತ್ಯೆ ಮಾಡಿಕೊಳ್ಳುವವರು ರಣಹೇಡಿಗಳು. ಸ್ವಾತಂತ್ರ್ಯ ದಿನಾಚರಣೆ ದಿನ ದೇಶಕ್ಕಾಗಿ ಹೋರಾಡಿದವರ ಫೋಟೊ ಪ್ರದರ್ಶಿಸಬೇಕೇ ಹೊರತು. ಇಂತಹವರ ಫೋಟೋ ಪ್ರದರ್ಶಿಸಬಾರದು. ನಾನೊಬ್ಬ ದೇಶಭಕ್ತನಾಗಿ ಆದ್ದರಿಂದ ಫೋಟೋ ಪ್ರದರ್ಶನ ತಡೆದಿದ್ದೆ' ಎಂದು ಹೇಳಿದ್ದರು.