ಚುನಾವಣೆಗೆ ನಿಲ್ಲಲ್ಲ, ಜೆಡಿಎಸ್ ಗೆಲ್ಲಿಸ್ತೀನಿ: ತುಮಕೂರಿನ ದಳಪತಿ ಚೆನ್ನಿಗಪ್ಪ
ತುಮಕೂರು, ಜನವರಿ 30: ಮಾಜಿ ಸಚಿವ ಸಿ.ಚೆನ್ನಿಗಪ್ಪ ಅವರ ಹೆಗಲಿಗೆ ಈಗ ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆ ಜವಾಬ್ದಾರಿ. ಈ ಹೊಸ ಹುದ್ದೆಯನ್ನು ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯನ್ನು ನಡೆಸಿದ ಅವರು, ಕೆಲ ಕಾಲ ಸಕ್ರಿಯ ರಾಜಕಾರಣದಿಂದ ದೂರವಿದ್ದ ನನಗೆ,ಜೆಡಿಎಸ್ ವರಿಷ್ಠರು ತುಮಕೂರು ಜಿಲ್ಲೆಯ ಜವಾಬ್ದಾರಿ ವಹಿಸಿದ್ದಾರೆ ಎಂದಿದ್ದಾರೆ.
ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜೊತೆಗೆ, ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ ಎಂದು ಚನ್ನಿಗಪ್ಪ ತಿಳಿಸಿದ್ದಾರೆ. ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಮೊದಲನೇಯದಾಗಿ ಫೆಬ್ರವರಿ 3 ರಂದು ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ರಮೇಶ್ಬಾಬು ಅವರನ್ನು ಗೆಲುವಿಗೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.[ತುಮಕೂರು: ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಮಾಜಿ ಸಚಿವ ಸಿ.ಚನ್ನಿಗಪ್ಪ]
ಅನಾರೋಗ್ಯದ ನಿಮಿತ್ತ ಕ್ಷೇತ್ರದ ವ್ಯಾಪ್ತಿಯ ಬೇರೆ ಜಿಲ್ಲೆಗಳಿಗೆ ಭೇಟಿ ನೀಡದೆ, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೂ ಪ್ರವಾಸ ಮಾಡಿ ಮತ ಯಾಚಿಸುತ್ತೇನೆ. ಆನಾರೋಗ್ಯ ನಿಮಿತ್ತ ವೈದ್ಯರ ಸಲಹೆ ಮೇರೆಗೆ ಕೊಂಚ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಮುಂದಿನ ಮಾರ್ಚ್ನಿಂದ ತುಮಕೂರು ಜಿಲ್ಲೆಯಲ್ಲಿ ನಿರಂತರ ಪ್ರವಾಸ ಹಮ್ಮಿಕೊಳ್ಳಲಿದ್ದೇನೆ ಎಂದರು.
ಚೆನ್ನಿಗಪ್ಪನವರು ಹೇಳಿದ ಮತ್ತಷ್ಟು ವಿವರಗಳು ಮುಂದಿನ ಸ್ಲೈಡ್ ಗಳಲ್ಲಿವೆ.
11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಲು ಯತ್ನ
ಅದೆಷ್ಟೇ ಕಷ್ಟವಾದರೂ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸುವುದು ನಮ್ಮ ಗುರಿ. ಜಿಲ್ಲೆಯಲ್ಲಿ ಜೆಡಿಎಸ್ ಪರವಾದ ವಾತಾವರಣವಿದೆ. ಅದನ್ನು ಬಳಸಿಕೊಂಡು ಪಕ್ಷ ಸಂಘಟನೆಗೆ ತೊಡಗುತ್ತೇನೆ. ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗೂಡಿ ಪಕ್ಷದ ಗೆಲುವಿಗೆ ಹೋರಾಟ ನಡೆಸಲಾಗುವುದು.
ಚುನಾವಣೆಗೆ ಸ್ಪರ್ಧಿಸಲ್ಲ
ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ. ಪಕ್ಷ ಸಂಘಟನೆಯೊಂದೇ ನನ್ನ ಗುರಿ. ಈಗಾಗಲೇ ವರಿಷ್ಠರ ಮುಂದೆ ನನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, ಎಷ್ಟೇ ಒತ್ತಡ ಬಂದರೂ ಚುನಾವಣೆಗೆ ಸ್ಪರ್ಧಿಸಲ್ಲ. ಹಾಲಿ, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ, ತಾಪಂ ಸದಸ್ಯರ ಜೊತೆ ಸೇರಿ ಜಿಲ್ಲೆಯಲ್ಲಿ ಪಕ್ಷವನ್ನು ಬಲವಾಗಿ ಕಟ್ಟುತ್ತೇನೆ.
ಗುಂಪುಗಾರಿಕೆಗೆ ಕಡಿವಾಣ
ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂದು ನನಗೆ ಅನ್ನಿಸುತ್ತಿಲ್ಲ. ಒಂದು ವೇಳೆ ಗುಂಪುಗಾರಿಕೆ ಇದ್ದರೆ ಮುಂದಿನ ಒಂದೆರಡು ವಾರಗಳಲ್ಲಿಯೇ ಎಲ್ಲ ಮುಖಂಡರೊಂದಿಗೆ ಚರ್ಚೆ ನಡೆಸಿ, ಕಡಿವಾಣ ಹಾಕುತ್ತೇನೆ. ಜೆಡಿಎಸ್ ಜನತೆಯ ಪಕ್ಷ. ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತದಲ್ಲಿ ರೈತರು, ಕೂಲಿ ಕಾರ್ಮಿಕರು, ಬಡವರು, ದೀನ ದಲಿತರಿಗೆ ನೀಡಿದ ಹಲವಾರು ಯೋಜನೆಗಳು ಇನ್ನೂ ಜನರ ಮನಸ್ಸಿನಲ್ಲಿವೆ. ಕಾರ್ಯಕರ್ತರ ಮೂಲಕ ಅವುಗಳನ್ನು ಮತ್ತೊಮ್ಮೆ ಮತದಾರರ ನೆನಪಿಗೆ ತರುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು.
ಭಿನ್ನರಿಗೆ ಎಚ್ ಡಿಕೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ
ಎಂ.ಎಲ್.ಸಿ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಹಾಕಿ ಪಕ್ಷದಿಂದ ಹೊರ ಹೋಗಿರುವ ಚಲವರಾಯಸ್ವಾಮಿ, ಜಮೀರ್ ಅಹಮದ್, ಬಾಲಕೃಷ್ಣ ಸೇರಿದಂತೆ ಯಾವ ಭಿನ್ನಮತೀಯ ನಾಯಕರಿಗೂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ.
5 ಸಾವಿರ ಅಂಗವಿಕಲರಿಗೆ ವಸ್ತ್ರದಾನ
ಫೆಬ್ರವರಿ 5ರಂದು ನನ್ನ ಹುಟ್ಟುಹಬ್ಬವಿದ್ದು, ಅಂದು 5 ಸಾವಿರ ಅಂಗವಿಕಲರಿಗೆ ವಸ್ತ್ರದಾನ ಮಾಡಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಕೈಲಾದಷ್ಟು ಧನ ಸಹಾಯ ಮಾಡಲಾಗುವುದು.