'ಹೈಕಮಾಂಡ್ ಸಲಹೆ ಪಾಲಿಸದ ಬಿಎಸ್ ವೈ, ಮೂಲ ಕಾರ್ಯಕರ್ತರಿಗೆ ಅನ್ಯಾಯ'
ಬಿಜೆಪಿಯ ರಾಷ್ಟ್ರಾಧ್ಯಕ್ಷರ ಎದುರು ತಮ್ಮ ಅಸಮಾಧಾನ ಬಗೆಹರಿಸಿಕೊಂಡು ಬಂದರು ಯಡಿಯೂರಪ್ಪ ಹಾಗೂ ಈಶ್ವರಪ್ಪ. ಆದರೆ ಅಲ್ಲಿ ನೀಡಿದ ಸೂಚನೆಗಳನ್ನು ಬಿಎಸ್ ವೈ ಮರೆತುಬಿಟ್ಟಿದ್ದಾರೆ ಎಂಬುದು ಮುಖಂಡರ ಆರೋಪ. ಆಕ್ರೋಶವೀಗ ಸಭೆಯಲ್ಲಿ ವ್ಯಕ್ತವಾಗಿದೆ
ತುಮಕೂರು, ಮಾರ್ಚ್ 4: ತುಮಕೂರಿನಲ್ಲಿ ಶುಕ್ರವಾರ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು. ಲಿಂಗಾಯತ ಸಮುದಾಯದ ಬಿಜೆಪಿಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದ 12 ಜಿಲ್ಲೆಗಳಿಂದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಪ್ರಮುಖ ಮುಖಂಡರು ಭಾಗಿಯಾಗಿದ್ದರು.
ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಚಿವ ರವೀಂದ್ರನಾಥ್, ಡಾ.ಶಿವಯೋಗಿಸ್ವಾಮಿ, ಬಿಜೆಪಿ ಮಾಜಿ ರಾಜ್ಯ ಕಾರ್ಯದರ್ಶಿ ಎಂ.ಬಿ.ನಂದೀಶ್ ಸೇರಿದಂತೆ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಹಾವೇರಿ ಇತರೆ ಜಿಲ್ಲೆಗಳ ಮುಖಂಡರು ಕೂಡ ಪಾಲ್ಗೊಂಡಿದ್ದರು.[ನಿಮಗೆ ಗುರಾಣಿಯಂತೆ ಬಳಕೆಯಾದ ಮುಖಂಡರ ಗತಿಯೇನು ಈಶ್ವರಪ್ಪನವರೆ?]
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಯಡಿಯೂರಪ್ಪ ಅವರಿಂದ ಮೂಲ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಹೈಕಮಾಂಡ್ ಸಲಹೆ ನೀಡಿದಂತೆ ಕೆಲ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಆಗಿಲ್ಲ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುತ್ತೇವೆ. ಒಂದು ವೇಳೆ ಮಾಡದೆ ಇದ್ದರೆ ಮತ್ತೆ ಹೈ ಕಮಾಂಡ್ ಭೇಟಿಯಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ರಾಷ್ಟ್ರಾಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ತ್ವರಿತವಾಗಿ ಜಾರಿಗೆ ತರಬೇಕು ಎಂದರು.