ನಾಳೆ ಬೆಂಗಳೂರಲ್ಲಿ ಬಿಎಸ್ವೈ ವಿರುದ್ಧ ಬಿಜೆಪಿ ಅತೃಪ್ತರ ಶಕ್ತಿ ಪ್ರದರ್ಶನ
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಸೊಗಡು ಶಿವಣ್ಣ, "ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆಯಾಗದ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು,” ಎಂದಿದ್ದಾರೆ.
ತುಮಕೂರು, ಏಪ್ರಿಲ್ 26: ನಾಳೆ ಬಿಜೆಪಿ ಅತೃಪ್ತ ಬಣದ ನಾಯಕರು ಬೆಂಗಳೂರಿನ ಕಿಂಗ್ಸ್ ಕೋರ್ಟ್ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಲು ಸಜ್ಜಾಗಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಸೊಗಡು ಶಿವಣ್ಣ, "ತುಮಕೂರು ಸೇರಿದಂತೆ ಇನ್ನೂ ಕೆಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆಯಾಗದ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು," ಎಂದು ಹೇಳಿದರು.[ಯಡಿಯೂರಪ್ಪ ಮುತ್ಸದ್ಧಿತನ ಮೆರೆದಿದ್ದಾರೆ - ಸೊಗಡು ಶಿವಣ್ಣ]
ಪಕ್ಷದ ಉಳಿವಿಗಾಗಿ ಈ ಸಮಾವೇಶ ನಡೆಸುತ್ತಿದ್ದೇವೆ. ಕೆಲ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆ ಯಾಗಿದೆ. ಇನ್ನೂ ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಆಗಿಲ್ಲ. ಹೀಗಾಗಿ ಇನ್ನುಳಿದ ಜಿಲ್ಲೆಗಳಲ್ಲಿ ಅಧ್ಯಕ್ಷರ ಬದಲಾವಣೆಯಾಗಬೇಕು. ಇದರ ಬಗ್ಗೆ ನಾಳೆ ಚರ್ಚಿಸಲಾಗುವುದು," ಎಂದು ಹೇಳಿದರು.
ಕೆ.ಎಸ್ ಈಶ್ವರಪ್ಪ, ಸೋಮಣ್ಣ ಬೇವಿನ ಮರದ, ಭಾನು ಪ್ರಕಾಶ್, ಎಸ್ ಎ ರವೀಂದ್ರನಾಥ್, ಸೊಗಡು ಶಿವಣ್ಣ ಸೇರಿದಂತೆ ಒಟ್ಟು 24 ಜನರ ಸಾಮೂಹಿಕ ನೇತೃತ್ವದಲ್ಲಿ ಈ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು ಎಂದು ಸೊಗಡು ಶಿವಣ್ಣ ಮಾಹಿತಿ ನೀಡಿದರು.
ನೋಟಿಸ್ ನೀಡಿದಾಗ ಕಣ್ಣಲ್ಲಿ ರಕ್ತ ಬಂತು. ನೋಟಿಸ್ ವಾಪಸ್ ತೆಗೆದುಕೊಂಡಾಗ ಕಣ್ಣಲ್ಲಿ ನೀರು ಬಂತು. ನೋಟೀಸಿನಿಂದ ಮನಸ್ಸಿಗೆ ತೀವ್ರ ನೋವಾಗಿತ್ತು ಎಂದು ಸೊಗಡು ಶಿವಣ್ಣ ಭಾವುಕರಾಗಿ ನುಡಿದರು. ಮುಂದಿನ ದಿನಗಳಲ್ಲಿ ಸಂತೋಷ ಕೂಡ ಆಗಬೇಕಾಗಿದೆ. ಹೀಗಾಗಿ ಹೋರಾಟ ಮಾಡುತ್ತಿದ್ದೇವೆ ಎದು ಅವರು ಹೇಳಿದರು.['ಹೈಕಮಾಂಡ್ ಸಲಹೆ ಪಾಲಿಸದ ಬಿಎಸ್ ವೈ, ಮೂಲ ಕಾರ್ಯಕರ್ತರಿಗೆ ಅನ್ಯಾಯ']
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗೊಂದಲ ಇರುವ ಜಿಲ್ಲೆಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಕೋರ್ ಕಮಿಟಿ ರಚಿಸಿದ್ದರು ಕೋರ್ ಕಮಿಟಿ ಸಮಸ್ಯೆ ಬಗೆಹರಿಸಲಿಲ್ಲ. ಜಿಲ್ಲಾಧ್ಯಕ್ಷರ ಬದಲಾವಣೆಯಾಗಲಿಲ್ಲ. ಬಳಿಕ ಖುದ್ದು ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರನ್ನೇ ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಆದುದರಿಂದ ಅನಿವಾರ್ಯವಾಗಿ ಪಾರ್ಟಿ ಉಳಿಸಲು ಸಮಾವೇಶ ಮಾಡುತ್ತಿದ್ದೇವೆ ಎಂದು ಸೊಗಡು ಶಿವಣ್ಣ ವಿವರಿಸಿದರು.
ಪ್ರಹ್ಲಾದ್ ಜೋಶಿ ಬಿಜೆಪಿ ರಾಜ್ಯಾಧ್ಕ್ಷರಾಗಿದ್ದಾಗ ಯಲಹಂಕ ಹಾಗು ದೇವದುರ್ಗ ಉಪಚುನಾವಣೆಯಲ್ಲಿ ಗೆದ್ದಿದ್ದೆವು ಇದೀಗ ನಂಜನಗೂಡು ಉಪಚುನಾವಣೆಯಲ್ಲಿ ಎಲ್ಲೋ ಹೆಚ್ಚು ಕಡಿಮೆ ಆಗಿ ಸೋತಿದ್ದೇವೆ ಎಂದು ಸೊಗಡು ಶಿವಣ್ಣ ಇದೇ ಸಂದರ್ಭದಲ್ಲಿ ಹೇಳಿದರು.
ನಂತರ ತುಮಕೂರಿನಲ್ಲಿ ನಡೆದ ಪಂಡಿತ್ ದೀನದಯಾಳ್ ವಿಸ್ತರಕಾ ಯೋಜನೆ ಸಮಾರಂಭದಲ್ಲಿ ಶಿವಣ್ಣ ಭಾಗಿಯಾದರು. ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರ ಆದೇಶ ಹಾಗು ಪ್ರಹ್ಲಾದ್ ಜೋಶಿ ಅವರ ಮಾತಿಗೆ ಬೆಲೆ ಕೊಟ್ಟು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಅವರು ತಿಳಿಸಿದರು.