ಕರ್ಣಾಟಕ ಬ್ಯಾಂಕ್ ಗುಬ್ಬಿ ಗೇಟ್ ಎಟಿಎಂನಲ್ಲಿ ಹಣ ಕದ್ದಿದ್ದವರು ಸಿಕ್ಕಿಬಿದ್ರು
ಮೂರು ತಿಂಗಳ ಹಿಂದೆ ತುಮಕೂರಿನ ಗುಬ್ಬಿ ಗೇಟ್ ಕರ್ಣಾಟಕ ಬ್ಯಾಂಕ್ ಎಟಿಎಂನಲ್ಲಿ ಹಣ ಕಳವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತುರುವೇಕೆರೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ
ತುಮಕೂರು, ಏಪ್ರಿಲ್ 18: ಎಟಿಎಂನಲ್ಲಿ ಹಣ ಕಳವು ಮಾಡಿದ್ದ ಆರೋಪಿಗಳು ಮೂರು ತಿಂಗಳ ನಂತರ ಸಿಕ್ಕಿಬಿದ್ದಿದ್ದಾರೆ. ತುಮಕೂರು ನಗರದ ಗುಬ್ಬಿಗೇಟ್ ಹತ್ತಿರ ಕರ್ಣಾಟಕ ಬ್ಯಾಂಕ್ ಎಟಿಎಂನಿಂದ 19 ಲಕ್ಷ ರುಪಾಯಿ ನಗದು ದೋಚಿದ್ದ ಆರೋಪಿಗಳು ಇದೀಗ ತುರುವೇಕೆರೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಡಾಬಸ್ ಪೇಟೆ ಸಮೀಪವಿರುವ ಚಿಕ್ಕಬಿದಿರೆ ಕಲ್ಲಿನ ಪ್ರಭು, ಚನ್ನರಾಯಪಟ್ಟಣ ಕಿರಿಸಾವೆಯ ಮೋಹನ್, ಅರಕಲಗೂಡು ಬನವಾಸೆಯ ಸ್ವಾಮಿ, ಬೆಂಗಳೂರು ಪೀಣ್ಯದ ಪುನೀತ, ಶಿರಾ ಕಳ್ಳಂಬೆಳ್ಳದ ರಘು ಬಂಧಿತರು. ತುರುವೇಕೆರೆಯ ಜಮೀನೊಂದರ ಬಳಿ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಮಾಹಿತಿ ಬಾಯಿ ಬಿಟ್ಟಿದ್ದಾರೆ.[ತುಮಕೂರಿನ ಕರ್ಣಾಟಕ ಬ್ಯಾಂಕ್ ಎಟಿಎಂ ನಲ್ಲಿ ಹಣ ಕಳವು]
ಆರೋಪಿಗಳಿಂದ ಕಬ್ಬಿಣ ತುಂಡರಿಸುವ ಕಟರ್, ಲಾಂಗು ವಶಪಡಿಸಿಕೊಳ್ಳಲಾಗಿದೆ. ತುಮಕೂರಿನ ಗುಬ್ಬಿ ಗೇಟ್ ಎಟಿಎಂನಲ್ಲಿ ಹಣ ಕಳವು ಮಾಡುವ ಮುನ್ನ ಆರೋಪಿಗಳು ಹನುಮಂತಪುರದ ಎಟಿಎಂ ದರೋಡೆಗೆ ಯತ್ನಿಸಿದ್ದರು. ಆದರೆ ಅಲ್ಲಿ ಜನರು ಇವರನ್ನು ಕಂಡು ಕಿರುಚಿದ್ದರಿಂದ ಅಲ್ಲಿಂದ ಹೊರಟುಬಂದು, ಗುಬ್ಬಿ ಗೇಟ್ ಎಟಿಎಂನಲ್ಲಿ ಕಳವು ನಡೆಸಿದ್ದಾಗಿ ಬಾಯಿ ಬಿಟ್ಟಿದ್ದಾರೆ.
ಈ ಕಳವು ಪ್ರಕರಣದಲ್ಲಿ ವಿವಿಧ ಹೆಸರು ಕೇಳಿಬಂದಿದ್ದವು. ಆರೋಪಿಗಳನ್ನು ಆಗಲೇ ಬಂಧಿಸಲಾಗಿದೆ ಎಂಬ ಸುದ್ದಿ ಕೂಡ ಹರಿದಾಡಿತ್ತು.