ತುಮಕೂರು ಟೋಲ್ ಪ್ಲಾಜಾ ಸಿಬ್ಬಂದಿ ಹಲ್ಲೆ, ನಿಜ ಸಂಗತಿ ಏನು?
ತುಮಕೂರು, ಮಾರ್ಚ್ 14: ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರ ವಿರುದ್ಧ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಪುಷ್ಟಿ ನೀಡುವ ಹಾಗೆ ಟೋಲ್ ಪ್ಲಾಜಾದ ಸಿಸಿ ಟಿವಿ ಫೂಟೇಜ್ ಸಹ ಮಾಧ್ಯಮಗಳಿಗೆ ದೊರೆತಿದ್ದು, ಅದರಲ್ಲಿ ಶಾಸಕರು ಒಬ್ಬರ ಮೇಲೆ ಕೈ ಮಾಡುತ್ತಿರುವುದು ಕಂಡುಬರುತ್ತದೆ.
ಟೋಲ್ ನಲ್ಲಿ ಗಣ್ಯರಿಗಾಗಿ ಮೀಸಲಾದ ಸಾಲಿನಲ್ಲಿ ತೆರಳಲು ಬಿಡದೆ ಕಾಯಿಸಿದರು ಎಂಬ ಕಾರಣಕ್ಕೆ ಶಾಸಕ ಸುರೇಶ್ ಗೌಡ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋ ಹರಿದಾಡುತ್ತಿದ್ದು, ಕೆಲವರು ಶಾಸಕರ ವರ್ತನೆಗೆ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.[ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?]
ಆದರೆ, ಒನ್ಇಂಡಿಯಾ ಕನ್ನಡ ಶಾಸಕರಿಗೆ ಕರೆ ಮಾಡಿ ಪ್ರತಿಕ್ರಿಯೆ ಪಡೆದಿದ್ದು, "ಟೋಲ್ ಪ್ಲಾಜಾದವರ ಧೋರಣೆಯನ್ನು ಹತ್ತು ವರ್ಷದಿಂದ ಸಹಿಸುತ್ತಿದ್ದೇನೆ. ಅವರ ವರ್ತನೆಯಿಂದ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸರಿಯಾಗಿ ನಿರ್ವಹಣೆ ಕೂಡ ಮಾಡುತ್ತಿಲ್ಲ. ಹಿರೇಹಳ್ಳಿಯವರೆಗೆ ನನ್ನ ಕ್ಷೇತ್ರದ ವ್ಯಾಪ್ತಿ ಇದೆ. ಎಷ್ಟು ಮಂದಿ ಇವರಿಂದ ತೊಂದರೆ ಅನುಭವಿಸಿದ್ದಾರೆ ಗೊತ್ತಾ?[ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ]
"ನಾನು ಹಲ್ಲೆ ಮಾಡಿದೆ. ಅದು ಸಿಸಿ ಟಿವಿ ಫೂಟೇಜ್ ನಲ್ಲಿದೆ ಎನ್ನುತ್ತಾರೆ. ಆದರೆ ಈ ಮಟ್ಟಕ್ಕೆ ತಲುಪುವುದಕ್ಕೆ ಆಗಿರುವ ತೊಂದರೆ ಏನು ಎಂಬ ಬಗ್ಗೆ ಕೂಡ ತಿಳಿದುಕೊಳ್ಳಬೇಕು ಅಲ್ವಾ? ಕೆಲವು ನನ್ನ ರಾಜಕೀಯ ವಿರೋಧಿಗಳು ಬೇಕೆಂತಲೆ ಪ್ರಚಾರ ನೀಡುತ್ತಿದ್ದಾರೆ. ಆ ಟೋಲ್ ಪ್ಲಾಜಾದವರಿಂದ ಎಷ್ಟು ತೊಂದರೆ ಆಗಿದೆ ಅಂತ ಜನರನ್ನೇ ಕೇಳಿ. ಎಷ್ಟು ಮಂದಿಗೆ ಗಾಯವಾಗಿದೆ, ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ? ಇದೆಲ್ಲ ಕೇಳೋರು ಯಾರು?" ಎಂದು ಹೇಳಿದರು.