ಗುಬ್ಬಿ ಯುವಕನ ವಿವಸ್ತ್ರಗೊಳಿಸಿ ಬಡಿದ 7 ಜನರ ಬಂಧನ
ತುಮಕೂರು, ಜನವರಿ 18: ಗುಬ್ಬಿಯ ಸುಭಾಷ್ ನಗರದ ಯುವಕನನ್ನು ವಿವಸ್ತ್ರಗೊಳಿಸಿ, ಚಪ್ಪಲಿ ಹಾರ ಹಾಕಿ ಮನಬಂದಂತೆ ಥಳಿಸಿ ಅಮಾನುಷವಾಗಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಡು ಪ್ರಕಾಶ್, ಮಂಜು, ನಾಗ ಸೇರಿದಂತೆ ಏಳು ಮಂದಿ ಆರೋಪಿಗಳು ಬಂಧಿಯಾಗಿದ್ದಾರೆ. ಯುವಕನ ಮೇಲೆ ಹಲ್ಲೆ ಪ್ರಕರಣ ದಾಖಲಾಗಿ, ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಸುದ್ದಿ ಮಿಂಚಿನಂತೆ ಹಬ್ಬಿದ ಪರಿಣಾಮ ಆರೋಪಿಗಳು ಜಾಗೃತರಾಗಿ ಗುಬ್ಬಿಯನ್ನು ಬಿಟ್ಟು ಬೆಂಗಳೂರಿಗೆ ಹೋಗಿ ತಲೆ ಮರೆಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಚುರುಕು ಕಾರ್ಯಾಚರಣೆಯನ್ನು ನಡೆಸಿದ ಡಿವೈಎಸ್ ಪಿ ಚಿದಾನಂದ ಸ್ವಾಮಿ ತಂಡ ತುಮಕೂರಿನ ರಿಂಗ್ ರೋಡ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.[ಹುಡುಗಿಯನ್ನು ಕೆಣಕಿದವನ ಬೆತ್ತಲು ಮಾಡಿ ಬಗ್ಗುಬಡಿದ ಜನ]
ಆ ಏಳೂ ಜನರನ್ನು ಕೊರಟಗೆರೆ ಠಾಣೆಗೆ ಕರೆತಂದು ವಿಚಾರಣೆ ನಡೆದಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ 323, 324, 504, 304 ಸೆಕ್ಷನ್ ಅಡಿ ಕೇಸ್ ದಾಖಲಿಸಿದ್ದಾರೆ.[ವಿಡಿಯೋ: ಹುಡುಗಿಯನ್ನು ಕೆಣಕಿದವನ ಬೆತ್ತಲು ಮಾಡಿ ಬಡಿದ ಜನ]
ಗುಬ್ಬಿಯ ಸುಭಾಷ್ ನಗರದ ಯುವಕನೊಬ್ಬ ಯುವತಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ತಂತ್ರ ರೂಪಿಸಿ ತೊಟ ಮನೆಯೊಂದಕ್ಕೆ ಕರೆಸಿಕೊಂಡು ಆತನನ್ನು ವಿವಸ್ತ್ರಗೊಳಿಸಿ, ಮನಬಂದಂತೆ ಥಳಿಸಿ, ಚಪ್ಪಲಿ ಹಾರ ಹಾಕಿ, ಗುಬ್ಬಿ ಹುಡುಗಿಯನ್ನು ಕೆಣಕಿದರೆ ಇದೇಗತಿ ಎಂದು ಯುವಕನಿಂದಲೇ ಬರೆಸಿ ಆತನ ಕೊರಳಿಗೆ ತಗಲು ಹಾಕಿ ಅಮಾನುಷ ಕೃತ್ಯವನ್ನು ಎಸಗಲಾಗಿತ್ತು. ಇದನ್ನು ಛಾಯಾಗ್ರಹಿಸಿದ ಚಿತ್ರ ಮತ್ತು ದೃಶ್ಯಗಳು ವಾಟ್ಸಪ್, ಜಾಲತಾಣದಲ್ಲಿ ಹರಿದಾಡುತ್ತಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.