ಬನವಾಸಿ ಕದಂಬೋತ್ಸವದಲ್ಲಿ ಸನದಿ ನಾಗರಾಜಯ್ಯಗೆ ಪಂಪ ಪ್ರಶಸ್ತಿ ಪ್ರದಾನ
ಶಿರಸಿ, ಫೆಬ್ರವರಿ, 2 : ಪಂಪ ಪ್ರಶಸ್ತಿಗೆ ಆಯ್ಕೆಯಾಗಿರುವ ಹೆಸರಾಂತ ಸಾಹಿತಿ ಬಿ.ಎ.ಸನದಿ .ಪ.ನಾಗರಾಜಯ್ಯ ಅವರಿಗೆ ಫೆಬ್ರವರಿ 18 ಮತ್ತು 19 ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿರಸಿ ಸಹಾಯಕ ಆಯುಕ್ತ ರಾಜು ಮೊಗವೀರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಫೆಬ್ರವರಿ 18 ಮತ್ತು 19 ರಂದು ಕದಂಬೋತ್ಸವ ನಡೆಯಲಿದ್ದು, ಉತ್ಸವದ ಯಶಸ್ಸಿಗೆ 14 ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.[ಪಂಪ ಪ್ರಶಸ್ತಿ ಪಡೆದ ಅಭಿಜಾತ ಕವಿ ಬಿ.ಎ. ಸನದಿ]
ಅಂದೇ ಸಾಹಿತಿಗಳಿಗೆ ಪಂಪ ಪ್ರಶಸ್ತಿ ನೀಡಲಾಗುತ್ತಿದ್ದು, ಕದಂಬೋತ್ಸವದ ಯಶಸ್ಸಿಗೆ ರಾಜ್ಯದಾದ್ಯಂತ ಮೂರು ದಿನ ಕದಂಬ ಜ್ಯೋತಿಯಾತ್ರೆ ನಡೆಯಲಿದೆ. ಫೆ.16 ರಂದು ಗುಡ್ನಾಪುರದಿಂದ ಜ್ಯೋತಿ ಯಾತ್ರೆ ಹೊರಡಲಿದೆ.
ಗುಡ್ನಾಪುರದಲ್ಲಿ ಬಂಗಾರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಫೆ. 18 ರಂದು ಸಂಜೆ 7 ಕ್ಕೆ ಉದ್ಘಾಟಿಸಲಿದ್ದು, ಸಚಿವರಾದ ಉಮಾಶ್ರೀ, ಪ್ರಿಯಾಂಕ ಖರ್ಗೆ, ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಫೆ.17,18 ರಂದು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಫೆ. 18 ರಂದು ಹಿಂದಿಯ ಖ್ಯಾತ ಗಾಯಕ ಕುನಾಲ ಗಾಂಜಾವಾಲಾ ಅವರ ಮತ್ತು ಫೆ.19 ಎಂ.ಡಿ.ಪಲ್ಲವಿ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.