ರಾಘವೇಶ್ವರ ಶ್ರೀಗಳ ಮೇಲೆ ಸರ್ಕಾರದ ಕುತಂತ್ರವೇನು?
ಶಿವಮೊಗ್ಗ, ನವೆಂಬರ್, 26 : ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳ ವಿರುದ್ಧದ ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಸರ್ಕಾರ ಹಿಂದಕ್ಕೆ ತೆಗೆದುಕೊಂಡಿರುವುದನ್ನು ಖಂಡಿಸಿದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಲವು ಮುಖಂಡರು, ಸರ್ಕಾರ ಹೊರಡಿಸಿದ ತನ್ನ ಆದೇಶವನ್ನು ಹಿಂಪಡೆದು ತನಿಖೆ ಮುಂದುವರೆಸಬೇಕು ಎಂದು ಸಾಗರ ಉಪವಿಭಾಗಧಿಕಾರಿಗಳ ಮುಖಾಂತರ ನವೆಂಬರ್ 25ರ ಬುಧವಾರದಂದು ಸರ್ಕಾರಕ್ಕೆ ಅಹವಾಲು ಸಲ್ಲಿಸಿದರು.
ರಾಘವೇಶ್ವರ ಸ್ವಾಮೀಜಿ ತೇಜೋವಧೆಯ ಉದ್ದೇಶದಿಂದ ನಕಲಿ ಅಶ್ಲೀಲ ಸಿಡಿ ತಯಾರಿಸಿ, ಪೋಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಕರಣವನ್ನು ಸರ್ಕಾರ ಏಕಾಏಕಿ ಯಾವುದೇ ಕಾರಣವನ್ನು ನೀಡದೆ ಹಿಂತೆಗೆದುಕೊಂಡಿರುವುದು ಖಂಡನೀಯ ಎಂದು ಸರ್ಕಾರದ ವಿರುದ್ಧ ಕೆಲವು ಮುಖಂಡರು ಕಿಡಿಕಾರಿದರು.[ಶ್ರೀಗಳ ತೇಜೋವಧೆಗೆ ಯತ್ನಿಸಿದವರ ಬಂಧನ]
ಆರೋಪಿತರ ವಿಚಾರಣೆ ನಡೆಯುತ್ತಿರುವ ಪ್ರಕರಣವನ್ನು ನ್ಯಾಯಾಲಯ ಹಿಂತೆಗೆದುಕೊಂಡಿರುವುದನ್ನು ನೋಡಿದರೆ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳ ಮೇಲೆ ದೊಡ್ಡ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದು ಬರುತ್ತಿದೆ.
ಸರ್ಕಾರ ಕೂಡಲೆ ಆದೇಶವನ್ನು ಹಿಂಪಡೆದು ನ್ಯಾಯಯುತ ತನಿಖೆ ನಡೆಸಲು ಅನುವುಮಾಡಿಕೊಡಬೇಕು ಎಂದು ಆಗ್ರಹಿಸಿ ಸಾಗರ ಮಂಡಲದ ಪ್ರಮುಖರು ಉಪವಿಭಾಗಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.[ರಾಘವೇಶ್ವರ ಶ್ರೀಗಳ ಬಗ್ಗೆ ಕೇಸ್ ಬಗ್ಗೆ ಕೆಲವು ಅನುಮಾನಗಳು, ಜಿಜ್ಞಾಸೆಗಳು]
ಈ ಸಂದರ್ಭದಲ್ಲಿ ಸಾಗರ ಮಂಡಲದ ಅಧ್ಯಕ್ಷರಾದ ಸಿ ಎಸ್ ಗಣಪತಿ, ಕಾರ್ಯದರ್ಶಿಗಳಾದ ಮುರಳಿ, ಮುಖಂಡರಾದ ಯು ಹೆಚ್ ರಾಮಪ್ಪ , ಸ್ವಾಮಿದತ್ತ ಹಕ್ರೆ, ಮಂಡಲ ವಲಯಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.