ಅಮ್ಮನ ಸಾವಿಗೆ ಕಾರಣ ಅಪ್ಪ! 3 ವರ್ಷದ ಮಗು ಬಾಯ್ಬಿಟ್ಟ ಸತ್ಯ!
ಸರಿಯಾಗಿ ಮಾತನಾಡಲೂ ಬಾರದ ಮುಗ್ಧ ಮಗು ತನ್ನಮ್ಮನ ಸಾವಿಗೆ ಅಪ್ಪನೇ ಕಾರಣ ಎಂದು ಬಾಯ್ಬಿಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹರಿಗೆ ಎಂಬಲ್ಲಿ ನಡೆದಿದೆ.
ಶಿವಮೊಗ್ಗ, ಏಪ್ರಿಲ್ 26: 'ನನ್ನಮ್ಮನನ್ನು ಸಾಯಿಸಿದ್ದು ಅಪ್ಪನೇ' ತಾಯಿಯ ಶವದ ಮುಂದೆ ನಿಂತು, 3 ವರ್ಷದ ಮಗುವೊಂದು ಬಿಕ್ಕುತ್ತ ತೊದಲು ನುಡಿಯಲ್ಲಿ ಹೇಳಿದರೆ ಹೇಗಿರುತ್ತದೆ? ಹೌದು, ಶಿವಮೊಗ್ಗ ಜಿಲ್ಲೆಯ ಹರಿಗೆ ಎಂಬ ಊರಿನಲ್ಲಿ ಇಂಥದೊಂದು ಮನಕಲಕುವ ಘಟನೆ ನಡೆದಿದೆ.
ನಿನ್ನೆ (ಏಪ್ರಿಲ್ 25) ತಡರಾತ್ರಿ ಇಲ್ಲಿನ ಬಿ.ಎಚ್.ರಸ್ತೆಯ ಹೊಲದಲ್ಲಿ ಮಹಿಳೆಯೊಬ್ಬರ ಬರ್ಬರ ಕೊಲೆಯಾಗಿತ್ತು. ಈ ಹೊಲದ ಸಮೀಪ ಯಾವುದೇ ಮನೆಗಳಿಲ್ಲದಿದ್ದರಿಂದ ಇಂದು(ಏಪ್ರಿಲ್ 26) ಬೆಳಗ್ಗೆಯವರೆಗೂ ಆ ಸ್ಥಳಕ್ಕೆ ಯಾರೊಬ್ಬರೂ ಬಂದಿರಲಿಲ್ಲ. ಬೆಳ್ಳಂಬೆಳಗ್ಗೆ ಹೊಲದ ಬಳಿ ಬಂದು ನೋಡಿದವರಿಗೆ ಕಂಡಿದ್ದು, ಒಂದು ಇಡೀ ರಾತ್ರಿ ತಾಯಿಯ ಶವದೆದುರು ರೋದಿಸುತ್ತ ಕುಳಿತ ಮೂರು ವರ್ಷದ ಪುಟ್ಟ ಮಗು![ಸಾಗರದಲ್ಲಿ ಭೀಕರ ಅಪಘಾತ: ಐವರ ದುರ್ಮರಣ]
ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಹಸಿದ ಮಗುವಿಗೆ ಆಹಾರ ನೀಡಿ, ಏನಾಯಿತೆಂದು ವಿಚಾರಿಸಿದ್ದಾರೆ. ಸರಿಯಾಗಿ ಮಾತನಾಡಲೂ ಬಾರದ ಮುಗ್ಧ ಮಗು ತನ್ನಮ್ಮನ ಸಾವಿಗೆ ಅಪ್ಪನೇ ಕಾರಣ ಎಂದು ಬಾಯ್ಬಿಟ್ಟಿದೆ! 'ಅಪ್ಪ, ತನ್ನನ್ನೂ, ಅಮ್ಮನನ್ನು ಬಸ್ಸಿನಲ್ಲಿ ಕರೆತಂದಿದ್ದ. ನಂತರ ಹೊಲದ ಬಳಿ ಕರೆತಂದು ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿದ' ಎಂದು ಮಗು ವಿವರಿಸಿದೆ.
ಮೃತ ಮಹಿಳೆಯ ಕೈಯಲ್ಲಿ ಯಲ್ಲಮ್ಮ-ನಾಗರಾಜ್ ಎಂಬ ಹಚ್ಚೆ ಇದೆ. ಪೊಲೀಸರ ತನಿಖೆಗೆ ಆಧಾರವಾಗಿರುವ ಸುಳಿವು ಎಂದರೆ ಇದೊಂದೇ! ಸದ್ಯಕ್ಕೆ ತುಂಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.