ಜೋಗ ಜಲಪಾತ ವೀಕ್ಷಣೆಗೆ ಕೆಎಸ್ ಟಿಡಿಸಿಯಿಂದ ವಿಶೇಷ ಬಸ್
ಬೆಂಗಳೂರು, ಆಗಸ್ಟ್ 4: ಮಲೆನಾಡಿನ ಅದ್ಭುತ ಸೌಂದರ್ಯದ ಪ್ರತೀಕವೆನ್ನಿಸಿದ ಜೋಗ ಜಲಪಾತಕ್ಕೆ ತೆರಳುವ ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ(ಕೆಎಸ್ ಟಿಡಿಸಿ)ಯು ಮುಂಗಾರಿನ ವಿಶೇಷ ಕೊಡುಗೆ ನೀಡುತ್ತಿದೆ.
ಮಲೆನಾಡಿನಲ್ಲಿ ಈಗ ಮಳೆಯೋಗ, ಧುಮ್ಮಿಕ್ಕುತ್ತಿದೆ ಜೋಗ
ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ ವೀಕ್ಷಣೆಗೆ ಬೆಂಗಳೂರಿನಿಂದ ಡಿಲಕ್ಸ್ ಬಸ್ ವ್ಯವಸ್ಥೆ ಕಲ್ಪಿಸುವ ವಿನೂತನ ಕೆಲಸಕ್ಕೆ ಕೆಎಸ್ ಟಿಡಿಸಿ ಕೈಹಾಕಿದೆ.
ವಾರಾಂತ್ಯ ಅಂದರೆ ಶನಿವಾರ ಮತ್ತು ಭಾನುವಾರದಂದು ಜಗತ್ಪ್ರಸಿದ್ಧ ಜೋಗ ಜಲಪಾತ ದರ್ಶನಕ್ಕೆ ಡಿಲಕ್ಸ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಂಗಳೂರಿನಿಂದ ಈ ಬಸ್ ರಾತ್ರಿ 10 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗ್ಗೆ 5.30 ಅಥವಾ 6 ಗಂಟೆಯ ಸಮಯಕ್ಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕನ್ನು ತಲುಪಲಿದೆ.
ಸಿಗಂದೂರು, ಜೋಗಜಲಪಾತ, ಸರ್ಕಾರದ ಜಂಗಲ್ ಲಾಡ್ಜಸ್ ಅಧೀನದ ಶರಾವತಿ ಸಾಹಸ ಶಿಬಿರಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುವುದು. ಈ ಪ್ಯಾಕೇಜ್ ಬೆಲೆ 1775 ರೂ.
ತಿರುಪತಿ ದರ್ಶನಕ್ಕೂ ಇಂಥದೇ ಯೋಜನೆ ರೂಪಿಸುವ ಚಿಂತನೆಯನ್ನೂ ಕೆಎಸ್ ಟಿಡಿಸಿ ನಡೆಸುತ್ತಿದೆ.