ಶಿವಮೊಗ್ಗ: ಕೈದಿ ಪರಾರಿ, ನಾಲ್ವರು ಸಿಬ್ಬಂದಿ ಅಮಾನತು
ಶಿವಮೊಗ್ಗ, ಮೇ 23 : ಜಿಲ್ಲಾ ಕಾರಾಗೃಹದಿಂದ ವಿಚಾರಣಾಧೀನ ಕೈದಿ ಪರಾರಿಯಾಗಿರುವ ಪ್ರಕರಣದ ಸಂಬಂಧ ಶಿವಮೊಗ್ಗ ಕಾರಾಗೃಹದ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಬಾಂಗ್ಲಾದೇಶ ಮೂಲದ ಮೊಹಮ್ಮದ್ ರೆಹಮಾನ್ ಹುಸೇನ್ (25) ಎಂಬಾತ ಭಾನುವಾರ ಕಾರಾಗೃಹದಿಂದ ಪರಾರಿಯಾಗಿದ್ದ. ಬೆಂಗಳೂರಿನ ಹೆಚ್ಚುವರಿ ಐಜಿಪಿ ವೀರಭದ್ರಸ್ವಾಮಿ ಹಾಗೂ ಬಂದೀಖಾನೆ ಉತ್ತರ ವಲಯದ ಡಿಐಜಿ ಶೇಷ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು.[ಶಿವಮೊಗ್ಗ ಜೈಲಿನಿಂದ ವಿಚಾರಣಾಧೀನ ಬಾಂಗ್ಲಾ ಕೈದಿ ಪರಾರಿ]
'ಜೈಲು ಗೋಡೆಗಳಿಂದ ಹಾರಿ, ಆತ ಪರಾರಿಯಾಗಿರುವ ಸಾಧ್ಯತೆ ಕಡಿಮೆ. ಮುಖ್ಯ ದ್ವಾರದಿಂದಲೇ ಆತ ಓಡಿಹೋಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ, ಕಾರಾಗೃಹದ ಪ್ರಧಾನ ಮೇಲ್ವಿಚಾರಕರಾದ ಜಿ.ಎಂ. ಮಹೇಶ್, ಎ.ಎಸ್. ಕೌಟ್ಕರ್, ಮುಖ್ಯ ವಾರ್ಡನ್ ಗಳಾದ ಆರ್.ಎಂ. ಪಾಟೀಲ್, ನಂದೀಶ್ ಅವರನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ' ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಮರಿಗೌಡ ತಿಳಿಸಿದ್ದಾರೆ.
ಭದ್ರಾವತಿಯ ಹಳೇನಗರ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ 15ರಂದು ಅನುಮಾನಸ್ಪಾದವಾಗಿ ತಿರುಗಾಡುತ್ತಿದ್ದ ಮೊಹಮ್ಮದ್ ನನ್ನು ಪೊಲೀಸರು ತಡೆದು ವಿಚಾರಿಸಿದಾಗ, ಆತನ ಬಳಿ ಯಾವುದೇ ವೀಸಾ, ಪಾಸ್ಪೋರ್ಟ್ ಇರಲಿಲ್ಲ. ಹಾಗಾಗಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.