'ಅಲ್ಪಸಂಖ್ಯಾತರಾಗುತ್ತಿರುವ ಬ್ರಾಹ್ಮಣರು ಸಮಾಜದಲ್ಲಿ ಮೂಲೆಗುಂಪು'
ಹೊಸನಗರ, ಮೇ 31: ಬ್ರಾಹ್ಮಣ ಸಮುದಾಯದವರು ಅಲ್ಪಸಂಖ್ಯಾತರಾಗುತ್ತಿದ್ದು, ಸಮಾಜದಲ್ಲಿ ಮೂಲೆ ಗುಂಪಾಗುತ್ತಿದ್ದಾರೆ ಎಂದು ಭೀಮನಕಟ್ಟೆ ಮಠದ ರಘುವರೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ನಡೆದ ತಾಲೂಕು ಬ್ರಾಹ್ಮಣ ಮಹಾಸಭಾದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.[ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]
ಧರ್ಮವನ್ನು ಪಾಲಿಸುವವರನ್ನು ಸಮಾಜವು ಗುರುತಿಸುತ್ತದೆ, ಗೌರವಿಸುತ್ತದೆ. ಆದ್ದರಿಂದ ಬ್ರಾಹ್ಮಣರು ಗಾಯತ್ರಿ ಜಪ ಅನುಷ್ಠಾನ ಹಾಗೂ ಷಡ್ಕರ್ಮವನ್ನು ಕಡ್ಡಾಯವಾಗಿ ಮಾಡಲೇ ಬೇಕು. ಕಾನ್ವೆಂಟ್ ಗಳ ಪ್ರಭಾವದಿಂದ ನಮ್ಮ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಜತೆಗೆ ಜ್ಞಾನವೂ ಕಣ್ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪೋಷಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.[ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲ ಪ್ರಶ್ನೆ!]
ಈ ಕಾರ್ಯಕ್ರಮದಲ್ಲಿ ನಾಟಿ ವೈದ್ಯೆ ಭಾಗಿಮನೆ ಲಕ್ಷ್ಮೀದೇವಮ್ಮ ಮತ್ತು ಯಕ್ಷಗಾನ ಕಲಾವಿದ ಅಡಿಕೆಚಿನಿ ಶ್ರೀನಿವಾಸರಾವ್ ಅವರನ್ನು ಸನ್ಮಾನ ಮಾಡಲಾಯಿತು.
ಇನ್ನು ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯ ಕುರಿತು ಪುತ್ತೂರಾಯ ಉಪನ್ಯಾಸವನ್ನು ನೀಡಿದರು. ವಿದ್ಯಾ ವಿನಯ ಭಟ್, ಲತಾ ಉಡುಪ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.