ಯಡಿಯೂರಪ್ಪಗೆ ಸಿಎಂ ಸ್ಥಾನ ತಪ್ಪಿಸಲು ಪಿತೂರಿ: ಆಯನೂರು
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಆಯನೂರು ಮಂಜುನಾಥ್.
ಶಿವಮೊಗ್ಗ, ಏಪ್ರಿಲ್ 28: ರಾಜ್ಯ ಬಿಜೆಪಿಯಲ್ಲಿ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ನಾಯಕ ಆಯನೂರು ಮಂಜುನಾಥ್, ಪಕ್ಷದೊಳಗಿನ ಕೆಲ ನಾಯಕರು ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವುದನ್ನು ತಪ್ಪಿಸಲು ಪಿತೂರಿ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.[ರೇವಣ್ಣ ಸಮರ್ಥ ಆದರೆ, ಸಿಎಂ ಅಭ್ಯರ್ಥಿಯಲ್ಲ: ದೇವೇಗೌಡ]
ಇತ್ತೀಚೆಗೆ ನಡೆದ ಗುಂಡ್ಲುಪೇಟೆ ಹಾಗೂ ಚಾಮರಾಜ ನಗರ ಉಪಚುನಾವಣೆಗಳಲ್ಲಿ ಬಿಜೆಪಿ ಸೋಲು ಕಂಡಿದ್ದಕ್ಕೆ ಆಳಿಗೊಂದು ಕಲ್ಲು ಎಂಬಂತೆ ಕೆಲ ನಾಯಕರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
ಉಪಚುನಾವಣೆ ನಡೆಯುತ್ತಿದ್ದಾಗ ಆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಬಾರದೇ, ತಮ್ಮ ಬ್ರಿಗೇಡ್ ಪಧಾಧಿಕಾರಿಗಳ ನೇಮಕದಲ್ಲಿ ನಿರತರಾಗಿದ್ದವರು ಇಂದು ಉಪಚುನಾವಣೆಯಲ್ಲಿ ಶ್ರಮ ವಹಿಸಿದ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಅವರನ್ನು ಟೀಕೆ ಮಾಡಿದರು.
ಅಲ್ಲದೆ, ಗುರುವಾರ ಅರಮನೆ ಮೈದಾನದಲ್ಲಿ ಕರೆಯಲಾಗಿದ್ದ ಬಿಜೆಪಿ ಅತೃಪ್ತರ ಸಭೆಯಲ್ಲಿ ನಡೆದ ಮಾರಾಮಾರಿ ವೇಳೆ ಆಕ್ಷೇಪಾರ್ಹ ಶಬ್ದಗಳನ್ನು ಕೆಲ ನಾಯಕರು (ಈಶ್ವರಪ್ಪ ಬೆಂಬಲಿಗರು) ಬಳಸಿದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ಅವಹೇಳನಕಾರಿಯಾಗಿ ಬಯ್ದಾಡಿದ್ದಾರೆ. ಇದು ಶೋಭೆ ತರುವಂಥದ್ದಲ್ಲ ಎಂದು ಅವರು ಹೇಳಿದರು.[ಬಿಜೆಪಿಯಲ್ಲಿ ಒಳಜಗಳ ಎಲ್ಲಿದೆ, ಬಿಎಸ್ ವೈ ಸಿಎಂ ಕ್ಯಾಂಡಿಡೇಟು: ಈಶು]
ಇದೇ ವೇಳೆ, ತಮ್ಮ ಮಾತುಗಳನ್ನು ನೇರವಾಗಿ ಈಶ್ವರಪ್ಪ ಕಡೆಗೆ ತಿರುಗಿಸಿದ ಅವರು, ಈಶ್ವರಪ್ಪ ಅವರ ಮೈಕ್ರೋ ಫೈನಾನ್ಸ್ ಸಂಸ್ಥೆಯ ಆದಾಯ ವರ್ಷದಿಂದ ವರ್ಷಕ್ಕೆ ಮೂರು ಪಟ್ಟು ಹೆಚ್ಚಾಗುತ್ತಲೇ ಇದೆ. ಹಾಗಾಗಿ, ಈಶ್ವರಪ್ಪ ಅವರನ್ನು ಹಣಕಾಸು ಸಚಿವರನ್ನಾಗಿಸುವುದು ಉತ್ತಮ ಎಂದು ತಿಳಿಸಿದರು.