ತ್ಯಾವರೆಕೊಪ್ಪದಲ್ಲಿ ಅಪಘಾತ, ಮದುವೆಗೆ ಹೊರಟಿದ್ದ ಏಳು ಮಂದಿ ಸ್ಥಳದಲ್ಲೇ ಸಾವು
ಶಿವಮೊಗ್ಗ, ಮೇ 4: ಮದುವೆ ದಿಬ್ಬಣಕ್ಕೆ ಹೊರಟಿದ್ದ ಬೆಂಗಳೂರಿನ ಜಾಲಹಳ್ಳಿಯ ಏಳು ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ಸಂಭವಿಸಿದೆ. ಸಾಗರದಲ್ಲಿ ಇದ್ದ ಸ್ನೇಹಿತನ ಮದುವೆಗಾಗಿ ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಎ-4-ಸಿಎ-9494 ಸಂಖ್ಯೆಯ ಇನ್ನೋವಾ ಕಾರು ಲಾರಿಗೆ ಡಿಕ್ಕಿಯಾಗಿದೆ.
ನೀಲಗಿರಿ ಮರಗಳನ್ನು ಸಾಗಿಸುತ್ತಿದ್ದ ಲಾರಿಗೆ ಇನ್ನೋವಾ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಏಳೂ ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಮಧು, ಶ್ರೀಧರ್ ಎಂದು ಗುರುತಿಸಲಾಗಿದ್ದು, ಉಳಿದ ಐವರ ವಿಳಾಸ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತದೇಹಗಳು ಗುರುತು ಸಿಗದಂತೆ ಛಿದ್ರವಾಗಿದ್ದವು.
ಕ್ರೇನ್ ನ ಸಹಾಯ ಪಡೆದು ಮೃತದೇಹಗಳನ್ನು ಕಾರಿನಿಂದ ಹೊರತೆಗೆಯಲಾಗಿದೆ. ಮದುವೆಗೆ ತೆರಳಬೇಕಿದ್ದ ಬೆಂಗಳೂರಿನ ಜಾಲಹಳ್ಳಿಯ ಏಳು ಯುವಕರು ಮಸಣ ಸೇರಿದ್ದಾರೆ. ಆದರೆ ಸದ್ಯಕ್ಕೆ ಮೃತರ ಪೈಕಿ ಇಬ್ಬರ ಗುರುತು ಮಾತ್ರ ಪತ್ತೆಯಾಗಿದ್ದು, ಉಳಿದವರ ಮಾಹಿತಿ ತಿಳಿಯಬೇಕಿದೆ.