ಪ್ರಧಾನಿ ಮೋದಿಯಿಂದ ರೈತರಿಗೆ ಅಗೌರವ: ರಾಹುಲ್ ಗಾಂಧಿ
ದೆಹಲಿಯ ಜಂತರ್ ಮಂತರ್ ಬಳಿ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡಿನ ರೈತರ ಬೆಂಬಲಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಧಾವಿಸಿದ್ದಾರೆ. ಪ್ರಧಾನಿ ಮೋದಿ ಧೋರಣೆಗೆ ಕಿಡಿ ಕಾರಿದ್ದಾರೆ
ನವದೆಹಲಿ, ಮಾರ್ಚ್ 31: ತಮಿಳುನಾಡಿನಲ್ಲಿ ಬರದಿಂದ ತತ್ತರಿಸಿದ ರೈತರು ಬರಪರಿಹಾರ ಪ್ಯಾಕೇಜ್ ಗೆ ಒತ್ತಾಯಿಸುತ್ತಿದ್ದಾರೆ. ಅವರ ಜತೆಗೆ ಮಾತುಕತೆ ನಡೆಸದ ಪ್ರಧಾನಿ ನರೇಂದ್ರ ಮೋದಿ, ರೈತರಿಗೆ ಅಗೌರವ ತೋರುತ್ತಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ನವದೆಹಲಿಯ ಜಂತರ್ ಮಂತರ್ ನಲ್ಲಿ ತಮಿಳುನಾಡು ರೈತರು ನಡೆಸುತ್ತಿರುವ ಹೋರಾಟ ಹದಿನೆಂಟನೆ ದಿನಕ್ಕೆ ಕಾಲಿರಿಸಿದ್ದು, ಅಲ್ಲಿಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಬಡಜನರ ವಿರೋಧಿ ಹಾಗೂ ರೈತ ವಿರೋಧಿ. ಆಯ್ದ ಕೈಗಾರಿಕೋದ್ಯಮಿಗಳ ಗುಂಪಿಗೆ ಮಾತ್ರ ಬೇಡಿಕೆಗಳನ್ನು ಈಡೇರಿಸುತ್ತಿದ್ದಾರೆ ಎಂದು ಆರೋಪಿಸಿದರು.[ಚುನಾವಣೆ ಗೆಲ್ಲಲು ರಾಹುಲ್ ಗೆ ಪಟ್ಟ ಕಟ್ಟುವುದೇ ಕಟ್ಟ ಕಡೆಯ ಆಯ್ಕೆ!]
ರೈತರು ಇಲ್ಲಿ ಇಷ್ಟು ದಿನಗಳಿಂದ ಚಳವಳಿ ನಡೆಸುತ್ತಿದ್ದಾರೆ. ಸರಕಾರವಾಗಲೀ ಪ್ರಧಾನಿಯಾಗಲೀ ಅವರ ಬೇಡಿಕೆಯನ್ನು ಕೇಳಿಸಿಕೊಳ್ಳುತ್ತಿಲ್ಲ. ತಮಿಳುನಾಡಿನ ಜನ ಹಾಗೂ ರೈತರ ಸಮಸ್ಯೆಯನ್ನು ಪ್ರಧಾನಿ ಕೇಳಿಸಿಕೊಳ್ಳಬೇಕಿತ್ತು. ಆದರೆ ಅವರೊಂದಿಗೆ ಮಾತುಕತೆ ಆರಂಭಿಸದೆ ಅಗೌರವ ತೋರುತ್ತಿದ್ದಾರೆ ಎಂದು ರಾಹುಲ್ ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಐವತ್ತು ಕೈಗಾರಿಕೋದ್ಯಮಿಗಳ 1.4 ಲಕ್ಷ ಕೋಟಿ ರುಪಾಯಿಯನ್ನು ರೈಟ್ ಆಫ್ ಮಾಡಿದ್ದಾರೆ. ಆದರೆ ರೈತರ ವಿಚಾರದಲ್ಲಿ ಇದೇಕೆ ಸಾಧ್ಯವಿಲ್ಲ. ಅವರ ಸಾಲಮನ್ನಾ ಏಕೆ ಮಾಡಿಲ್ಲ? ಹೀಗೆ ಮಾಡಲು ಪ್ರಧಾನಿ ಜವಾಬ್ದಾರರೇ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.[ರಾಹುಲ್ ಗಾಂಧಿ ಬ್ರಾಂಡ್ ಇಮೇಜ್ ಮರುಕಟ್ಟುವ ಕಸರತ್ತು]
ರೈತರ ಬೇಡಿಕೆ ಈಡೇರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ರೈತರ ಕಷ್ಟಗಳ ಬಗ್ಗೆ ಸಂಸತ್ತು ಹಾಗೂ ತಮಿಳುನಾಡಿನಲ್ಲಿ ಧ್ವನಿ ಎತ್ತುತ್ತದೆ. ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಬೇಕು. ಬರಪರಿಹಾರ ಹಾಗೂ ಬೆಂಬಲ ಬೆಲೆ ಘೋಷಿಸಬೇಕು. ಕನಿಷ್ಠ ಪಕ್ಷ ರೈತರ ಜತೆ ಪ್ರಧಾನಿ ಮಾತನಾಡಬೇಕು ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಜತೆಗೆ ತಮಿಳು ನಾಡು ಕಾಂಗ್ರೆಸ್ ಮುಖ್ಯಸ್ಥ ತಿರುನಾವುಕ್ಕರಸರ್ ಮತ್ತು ಪಕ್ಷದ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಇದ್ದರು. ತಮಿಳುನಾಡಿನ ಕಾವೇರಿ ವಲಯದ ರೈತರು ಕೇಂದ್ರದಿಂದ 40 ಸಾವಿರ ಕೋಟಿ ಪರಿಹಾರಕ್ಕೆ ಆಗ್ರಹಿಸಿ, ಕೃಷಿ ಸಾಲ ಮನ್ನಾಗೆ ಒತ್ತಾಯಿಸಿ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಹೋರಾಟ ನಡೆಸಿದ್ದಾರೆ.[ರಾಹುಲ್ ಒಬ್ಬ ಪಾರ್ಟ್ ಟೈಮ್ ರಾಜಕಾರಣಿ: ಕೃಷ್ಣ ವ್ಯಂಗ್ಯ]
ನಾವು ದೇಶದ ರಾಜಧಾನಿಯಲ್ಲಿ ಪ್ರಾಣ ಬಿಡ್ತೀವಿ. ಆದರೆ ಖಾಲಿ ಕೈಯಲ್ಲಿ ತಮಿಳುನಾಡಿಗೆ ವಾಪಸ್ ಆಗಲ್ಲ ಎಂದು ರೈತ ಮುಖಂಡ ಅಯ್ಯಕ್ಕಣ್ಣು ಹೇಳಿದ್ದಾರೆ.