ಕೋಣೆಯಿಂದ ಸುನಂದಾ ಬಟ್ಟೆ, ಶೂ ಹೊರಸಾಗಿಸಿದ್ದು ಯಾರು?
ಸುನಂದಾ ಪುಷ್ಕರ್ ಕೊಲೆ ಪ್ರಕರಣ ತನಿಖೆಯಲ್ಲಿ ಪೊಲೀಸರಿಗೆ ಮತ್ತೊಂದು ಸುಳಿವು ಸಿಕ್ಕಿದೆ. ಹತ್ಯೆ ನಡೆದ ನಂತರ ಅವರ ಬಟ್ಟೆ ಹಾಗೂ ಬೂಟನ್ನು ಯಾರೋ ಕೋಣೆಯಿಂದ ಹೊರಗೆ ಒಯ್ದಿರುವುದು ಪತ್ತೆಯಾಗಿದೆ. ಇದು ಪ್ರಕರಣ ಮರೆಮಾಚಲು ನಡೆಸಿದ ಪ್ರಯತ್ನ ಎಂದು ಪೊಲೀಸರು ಶಂಕಿಸಿದ್ದಾರೆ.
ದಿನಗಳೆದಂತೆ ಇದೊಂದು ಯೋಚಿತ ಹತ್ಯೆ ಎಂಬುದಕ್ಕೆ ಪೊಲೀಸರಿಗೆ ಹಲವು ಸಾಕ್ಷ್ಯಗಳು ದೊರೆಯುತ್ತಿವೆ. ಒಂದು ವೇಳೆ ಇದು ಆತ್ಮಹತ್ಯೆಯೇ ಆಗಿದ್ದರೆ ಅವರ ವಸ್ತುಗಳನ್ನು ಹೊರಗೊಯ್ಯುವ ಅಗತ್ಯವಿರಲಿಲ್ಲ. ಸುನಂದಾ ಮೃತಳಾದ ನಂತರ ಅವರ ಕೋಣೆಗೆ ಒಬ್ಬರಿಗಿಂತ ಹೆಚ್ಚು ಜನ ಬಂದುಹೋಗಿದ್ದಾರೆಂಬುದು ಈಗಾಗಲೇ ತನಿಖೆಯಲ್ಲಿ ತಿಳಿದುಬಂದಿದೆ. [4 ತಾಸು ಶಶಿ ತರೂರ್ ವಿಚಾರಣೆ]
ಅಲ್ಲದೆ, ಅಲ್ಲೊಂದು ಒಡೆದ ಗ್ಲಾಸ್ ಕೂಡ ಪತ್ತೆಯಾಗಿದೆ. ಹತ್ಯೆ ಸಂದರ್ಭ ಹಣಾಹಣಿ ನಡೆದಿತ್ತು, ಹತ್ಯೆಗೈದ ವ್ಯಕ್ತಿ ತನ್ನನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಈ ಗಾಜನ್ನು ಒಡೆದುಹಾಕಿದ್ದಾನೆಂದು ಪೊಲೀಸರು ಊಹಿಸಿದ್ದಾರೆ.
ಐಪಿಎಲ್ ವಿವಾದ ಹತ್ಯೆಗೆ ಕಾರಣವೇ? : ಸುನಂದಾ ಹತ್ಯೆಗೆ ಐಪಿಎಲ್ ಕಾರಣವೇ ಎಂಬುದರ ಕುರಿತು ಸಿಟ್ ತಂಡವೀಗ ತೀವ್ರ ತನಿಖೆ ನಡೆಸುತ್ತಿದೆ. ಕೆಲವರು ತಾವು ಹೇಳಿದಂತೆ ಐಪಿಎಲ್ ವ್ಯವಹಾರ ಮಾಡದ ಕಾರಣ ಹತ್ಯೆ ನಡೆಸಿರಬಹುದು ಎಂಬುದು ಪೊಲೀಸರ ಅಂದಾಜು. [ಪರಿಚಿತರೇ ಸುನಂದಾಗೆ ಇಂಜೆಕ್ಷನ್ ಚುಚ್ಚಿದ್ದು]
"ಐಪಿಎಲ್ ಕಾರಣದಿಂದ ನಾವು ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದೇನೆ. ನನಗೆ ಇದರಿಂದ ಬೇಸರವಾಗಿದೆ" ಎಂದು ಸುನಂದಾ ಹತ್ತಿರದ ವ್ಯಕ್ತಿಗಳಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಸುನಂದಾ ಹೇಳಬಯಸಿದ್ದ ವಿಷಯಗಳೇನು? : ಕೆಲವರ ಪ್ರಕಾರ ಸುನಂದಾ ಅವರಿಗೆ ಐಪಿಎಲ್ ವಿವಾದ ಕುರಿತು ಹಲವು ವಿಷಯಗಳು ತಿಳಿದಿದ್ದವು. ಅವುಗಳನ್ನು ಸಾರ್ವಜನಿಕವಾಗಿ ಹೇಳಲು ಅವರು ನಿರ್ಧರಿಸಿದ್ದರು. ಆದರೆ, ಶಶಿ ತರೂರ್ ಈ ಕುರಿತು ತಮಗೇನೂ ತಿಳಿದಿಲ್ಲ ಎಂದು ತಿಳಿಸಿದ್ದಾರೆ. [ತರಾರ್ ಜೊತೆ 3 ರಾತ್ರಿ ಕಳೆದರೇ ತರೂರ್?]
"ಸುನಂದಾ ಅವರು ಕೆಲವು ಮುಖ್ಯ ವಿಷಯಗಳನ್ನು ಹೊರಹಾಕಲು ಬಯಸಿದ್ದರು" ಎಂಬ ಅಂಶ ಕುರಿತು ಪೊಲೀಸರು ಹೆಚ್ಚು ಗಮನ ಹರಿಸಿದ್ದಾರೆ. "ಸುನಂದಾ ಏನು ಹೇಳಲು ಬಯಸಿದ್ದರು ಎಂಬುದರ ಕುರಿತು ನನಗೇನೂ ತಿಳಿದಿಲ್ಲ" ಎಂದು ಶಶಿ ತರೂರ್ ಪೊಲೀಸರಿಗೆ ತಿಳಿಸಿದ್ದಾರೆ. [ಸುನಂದಾ ಸಾವು ಹುಟ್ಟುಹಾಕಿದ 5 ಪ್ರಶ್ನೆಗಳು]
ಆದರೆ, ಸುನಂದಾ ಹೇಳಲು ಬಯಸಿದ್ದ ವಿಷಯ ಕುರಿತು ತಮ್ಮ ಹತ್ತಿರದ ವ್ಯಕ್ತಿಗಳೊಂದಿಗೆ ಚರ್ಚಿಸಿರುತ್ತಾರೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.