ಜೆಎನ್ಯು ಹಗರಣದ ರೂವಾರಿ ಉಮರ್ ಖಾಲೀದ್ ಎಲ್ಲಿ?
ಬೆಂಗಳೂರು, ಫೆಬ್ರವರಿ 20 : ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಉಗ್ರ ಅಫ್ಜಲ್ ಗುರು ಪರ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ ಉಮರ್ ಖಾಲೀದ್ ಎಂಬಾತ ಎಲ್ಲಿದ್ದಾನೆ? ಕಾಶ್ಮೀರಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಸುಮಾರು 800 ಕರೆಗಳನ್ನು ಮಾಡಿದ್ದಾನೆನ್ನಲಾದ ಉಮರ್ ಸದ್ಯಕ್ಕೆ ತಲೆಮರೆಸಿಕೊಂಡಿದ್ದಾನೆ.
ಜೆಎನ್ಯು ಹಗರಣಕ್ಕೆ ಮೂಲ ಕಾರಣವಾಗಿದ್ದಾನೆ ಎನ್ನಲಾದ ಉಮರ್ ಖಾಲೀದ್ ಪತ್ತೆಗಾಗಿ ದೆಹಲಿ ಪೊಲೀಸರು ಬಲೆ ಬೀಸಿದ್ದಾರೆ. ಆತನ ಸುಳಿವು ಎಲ್ಲೂ ಸಿಕ್ಕಿಲ್ಲ. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪತ್ರಕರ್ತರೊಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೂಡ ನಡೆಸಿದ್ದಾರೆ.
ಉಮರ್ ಖಾಲೀದ್ 800 ಕರೆ ಮಾಡಿರುವ ಬಗ್ಗೆ ಖಚಿತವಾಗಿ ಯಾವ ಮಾಹಿತಿಯನ್ನೂ ಪೊಲೀಸರು ನೀಡುತ್ತಿಲ್ಲ. ಆದರೆ, ಜೆಎನ್ಯು ನಲ್ಲಿ, 2001ರ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರು ಪರವಾಗಿ ವಿದ್ಯಾರ್ಥಿಗಳನ್ನು ಸೇರಿಸಿದ್ದು ಉಮರ್ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎನ್ನುತ್ತಾರೆ ಪೊಲೀಸರು. [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]
ದೇಶದ್ರೋಹಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಜೆಎನ್ಯು ಯೂನಿಯನ್ ಲೀಡರ್ ಕನ್ಹಯ್ಯ ಕುಮಾರ್ ವಿಚಾರಣೆಯ ಸಂದರ್ಭದಲ್ಲಿ ಉಮರ್ ಖಾಲೀದ್ ಹೆಸರು ಕೂಡ ಪ್ರಸ್ತಾಪವಾಗಿದೆ. ಜಾಮೀನು ಅರ್ಜಿಯನ್ನು ಕನ್ಹಯ್ಯ ಹೈಕೋರ್ಟಿಗೆ ಸಲ್ಲಿಸಿದ್ದು, ಬರುವ ವಾರದ ಆರಂಭದಲ್ಲಿ ವಿಚಾರಣೆಗೆ ಬರಲಿದೆ.
ಭಾರತದ ಐಕ್ಯತೆಗೆ ಬೆಂಕಿ ಇಡುವಂಥ ಘಟನೆಗೆ ಕಾರಣವಾಗಿರುವ ಉಮರ್ ಖಾಲೀದ್ನೇ ಈ ಪ್ರಕರಣದ ರೂವಾರಿ ಎಂಬುದರ ಕುರಿತು ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ದೆಹಲಿ ಪೊಲೀಸ್ ಮೂಲಗಳು ಒನ್ಇಂಡಿಯಾಕ್ಕೆ ತಿಳಿಸಿವೆ. ಆದರೆ, 800 ಕರೆ ಮಾಡಿರುವ ಮಾಧ್ಯಮಗಳ ವರದಿ ಬಗ್ಗೆ ಅವರು ಹೆಚ್ಚೇನೂ ಹೇಳುತ್ತಿಲ್ಲ. ["ನಾನು ಒಗ್ಗಟ್ಟು ಮುರಿಯುವವರ ಎದೆ ಒದೆಯುವ ಭಾರತೀಯ"]
ಈ ನಡುವೆ, "ನನ್ನ ಮಗ ಮುಗ್ಧ. ಆತ ಯಾವುದೇ ದೇಶದ್ರೋಹದ ಕೃತ್ಯದಲ್ಲಿ ಭಾಗಿಯಾಗಿಲ್ಲ. ಆತ ಎಲ್ಲಿದ್ದಾನೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಈ ಪ್ರಕರಣದಿಂದಾಗಿ ನನಗೆ ಬೆದರಿಕೆ ಕರೆಗಳು ಬರುತ್ತಿವೆ" ಎಂದು ಉಮರ್ ಖಾಲೀದ್ ತಂದೆ ಡಾ. ಸೈಯದ್ ಕಾಸಿಮ್ ರಸೂಲ್ ಇಲಿಯಾಸ್ (ಜೆಎನ್ಯು ಪಿಎಚ್ಡಿ ವಿದ್ವಾಂಸ) ಅವರು ಒನ್ಇಂಡಿಯಾ ಎದಿರು ಅಳಲು ತೋಡಿಕೊಂಡಿದ್ದಾರೆ.
ಡಾ. ಸೈಯದ್ ಕಾಸಿಮ್ ರಸೂಲ್ ಇಲಿಯಾಸ್ ಒಂದಾನೊಂದು ಕಾಲದಲ್ಲಿ ಉಗ್ರ ಸಂಘಟನೆ ಸಿಮಿ ಜೊತೆ ಗುರುತಿಸಿಕೊಂಡಿದ್ದರು. "ನಾನೀಗ ಅದನ್ನು ತೊರೆದಿದ್ದು, ಅದರ ಜೊತೆ ಯಾವುದೇ ಸಂಪರ್ಕವೂ ಇಲ್ಲ" ಎಂದಿದ್ದಾರೆ ಇಲಿಯಾಸ್. ಅವರ ವಿರುದ್ಧ ಬರುತ್ತಿರುವ ಜೀವಬೆದರಿಕೆ ಕರೆಗಳ ದೂರಿನ ಮೇಲೆ ಕೇಸನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.