ಮಲ್ಯ ಬಂಧನ- ಬಿಡುಗಡೆ: ಮೋದಿ ಪ್ರತಿಕ್ರಿಯೆ ಏನು?
ಮದ್ಯದ ದೊರೆ ವಿಜಯ ಮಲ್ಯ ಅವರ ಬಂಧನ ಮತ್ತು ಬಿಡುಗಡೆ ಪ್ರಹಸನದ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು ಗೊತ್ತೆ..?
ನವದೆಹಲಿ, ಏಪ್ರಿಲ್ 19: ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಹಣವನ್ನು ಕೊಳ್ಳೆಹೊಡೆದವರು ತಾವು ಕೊಳ್ಳೆ ಹೊಡೆದ ಹಣವನ್ನು ಹಿಂದಿರುಗಿಸಲೇಬೇಕು... ಹೀಗೆಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಲಂಡನ್ನಿನ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಂದ ಬಂಧಿಸಲ್ಪಟ್ಟು, ಮೂರೇ ಗಂಟೆಗಳಲ್ಲಿ ಜಾಮೀನನ್ನೂ ಪಡೆದ ಮದ್ಯದ ದೊರೆ ವಿಜಯ ಮಲ್ಯ ಅವರ ಕುರಿತೇ ಈ ಟ್ವೀಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
"ಭ್ರಷ್ಟಾಚಾರ ಕೇವಲ ನಾವು ಕಷ್ಟಪಟ್ಟು ದುಡಿದ ಹಣವನ್ನಷ್ಟೇ ಕೊಳ್ಳೆಹೊಡೆಯುತ್ತಿಲ್ಲ, ಬದಲಾಗಿ ನಮ್ಮ ಘನತೆಯನ್ನೂ ಕೊಳ್ಳೆಹೊಡೆಯುತ್ತಿದೆ" ಎಂದು ಮೋದಿಯವರ ಟ್ವಿಟ್ಟರ್ ಫಾಲೋವರ್ ಒಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನರೇಂದ್ರ ಮೋದಿ, ಲೂಟಿ ಹೊಡೆದವರು ಆ ಹಣವನ್ನು ದೇಶಕ್ಕೆ ಹಿಂದಿರುಗಿಸಲೇ ಬೇಕು ಎಂದಿದ್ದಾರೆ.[ಮಲ್ಯ ಬಂಗಲೆಗೆ ಹೊಸ ವಾರಸ್ದಾರ, ಹೆಸ್ರು ಬದಲಿಸ್ತೀನಿ ಅಂತಾರ!]
ಏಪ್ರಿಲ್ 18 ರಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಂದ ಬಂಧನಕ್ಕೊಳಗಾಗಿ ನಂತರ ವೆಸ್ಟ್ ಮಿನಿಸ್ಟರ್ ಕೋರ್ಟಿನಲ್ಲಿ ಜಾಮೀನು ಪಡೆದು ಹೊರಬಂದ ಮಲ್ಯ ಅವರ ಬಂಧನಕ್ಕೆ ಭಾರತವೇ ಕೋರಿತ್ತು. ಮೇ 17 ರಿಂದ ಮಲ್ಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿರುವ ಇಲ್ಲಿನ ನ್ಯಾಯಾಲಯ, ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೆ, ಬೇಡವೆ ಎಂಬುದನ್ನು ನಿರ್ಧರಿಸಲಿದೆ.[ಹಾಸ್ಯ: ಮಲ್ಯಗೆ ಸಿಕ್ತು ಬೇಲು, ಪತ್ತೇದಾರಿ ಪ್ರತಿಭಾಗೆ ಸೋಲು]
ಒಟ್ಟಿನಲ್ಲಿ ಮೋದಿಯವರ ಟ್ವೀಟ್ ನಲ್ಲಿ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂಬ ಪರೋಕ್ಷ ಟಾಂಗ್ ಇರುವುದನ್ನು ಅಲ್ಲಗಲೆಯುವಂತಿಲ್ಲ.