ಸಾಲಮನ್ನಾ ಒಂದು ಫ್ಯಾಶನ್ ಎಂದ ನಾಯ್ಡು ರೈತರ ಕ್ಷಮೆ ಕೇಳಲಿ: ಕಾಂಗ್ರೆಸ್
ನವದೆಹಲಿ, ಜೂನ್ 23: ಸಾಲಮನ್ನಾ ಎಂಬುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿಬಿಟ್ಟಿದೆ ಎಂಬ ತಮ್ಮ ಹೇಳಿಕೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಹೇಳಿಕೆಗಾಗಿ ವೆಂಕಯ್ಯ ನಾಯ್ಡು ರೈತರ ಕ್ಷಮೆ ಕೇಳಬೇಕೆಂದೂ ಅದು ಹೇಳಿದೆ.
ಕೃಷಿ ಸಾಲ ಮನ್ನಾ ಶೋಕಿಯೇ? ಎಂಥ ಮಾತಾಡ್ತೀರಿ ವೆಂಕಯ್ಯ ನಾಯ್ಡು!
ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಇಂಥ ಹೇಳಿಕೆ ನೀಡುವುದು ಸರಿಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ರೈತರ ಆಕ್ರೋಶ ಹಿಂಸಾರೂಪಕ್ಕೆ ತಿರುಗುತ್ತಿದ್ದಂತೆಯೇ, ಮಹಾರಾಷ್ಟ್ರದಲ್ಲಿ ರೈತರ ಮನ್ನಾ ಮಾಡುವುದಾಗಿ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ್ದರು. ನಂತರ ಪಂಜಾಬ್ ಮತ್ತು ಕರ್ನಾಟಕದಲ್ಲೂ ರೈತರ ಸಾಲಮನ್ನಾ ಘೋಷಣೆ ಮಾಡಲಾಯಿತು.
ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾತನಾಡಿದ್ದ ವೆಂಕಯ್ಯ ನಾಯ್ಡು, ರೈತರ ಸ್ಥಿತಿ ತೀರಾ ಚಿಂತಾಜನಕವಾಗಿದ್ದರೆ ಮತ್ತು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸಾಲಮನ್ನಾ ಮಾಡಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಸಾಲಮನ್ನಾ ಮಾಡುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ, ಅಗತ್ಯವಿಲ್ಲದಿದ್ದರೂ ಸರ್ಕಾರಗಳು ಸಾಲಮನ್ನಾ ಮಾಡುತ್ತಿವೆ ಎಂದಿದ್ದರು.
ಇದರಿಂದ ಕುಪಿತರಾದ ಕಾಂಗ್ರೆಸ್ ನಾಯಕರು, ನಾಯ್ಡು ರೈತರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಕರ್ನಾಟಕದಲ್ಲೂ ಸಾಲಮನ್ನಾ ಮಾಡಿರುವುದರ ಹಿಂದೆ 2018 ರ ವಿಧಾನಸಭಾ ಚುನಾವಣೆಯ ದೂರಾಲೋಚನೆ ಇದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ!