ಅಪನಗದೀಕರಣದ ನಂತರ ಲೆಕ್ಕಕ್ಕೆ ಕೊಡದ 5,400 ಕೋಟಿ ರುಪಾಯಿ ಪತ್ತೆ!
ಅಪನಗದೀಕರಣದ ನಂತರ ಅಂದರೆ ನವೆಂಬರ್ 9,2016ರಿಂದ ಜನವರಿ 10,2017ರವರೆಗೆ 1,100ಕ್ಕೂ ಹೆಚ್ಚು ಶೋಧ ಕಾರ್ಯಾಚರಣೆಯನ್ನು ಐಟಿ ಅಧಿಕಾರಿಗಳು ಲೆಕ್ಕಕ್ಕೆ ಕೊಡದ 5,400 ಕೋಟಿ ಪತ್ತೆ ಹಚ್ಚಿದ್ದಾರೆ ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ
ನವದೆಹಲಿ, ಏಪ್ರಿಲ್ 12: ಅಪನಗದೀಕರಣದ ಘೋಷಣೆ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 1,100 ಶೋಧ ಕಾರ್ಯಾಚರಣೆ ನಡೆಸಿ, ಲೆಕ್ಕಕ್ಕೆ ಕೊಡದ 5,400 ಕೋಟಿ ರುಪಾಯಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಅಪನಗದೀಕಾಣಾದ ಅವಧಿಯಲ್ಲಿ ನಗದು ಜಮೆ ಮಾಡಿದ ಹದಿನೆಂಟು ಲಕ್ಷ ಮಂದಿಯ ಆದಾಯ ಹಾಗೂ ಜಮೆ ಮಧ್ಯೆ ತುಂಬ ವ್ಯತ್ಯಾಸವಿರುವುದು ಪತ್ತೆಯಾಗಿದ್ದು, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮತ್ತು ಆನ್ ಲೈನ್ ಮೂಲಕ ಅವರ ಉತ್ತರಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದರು.[200ರೂ. ನೋಟು ಬರುತ್ತಂತೆ, ಅಂತೆ-ಕಂತೆ!]
ಪ್ರಶ್ನೋತ್ತರ ಕಲಾಪದ ವೇಳೆ ಉತ್ತರಿಸಿದ ಜೇಟ್ಲಿ, ಇತ್ತೀಚೆಗೆ ಯಾವುದೇ ಸರಕಾರ ಕಪ್ಪು ಹಣದ ವಿರುದ್ಧ ಇಂಥ ಕ್ರಮ ತೆಗೆದುಕೊಂಡಿರಲಿಲ್ಲ. ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಬೇರೆ ಜಾಲಗಳಿಂದ ಮಾಹಿತಿ ಕಲೆ ಹಾಕುತ್ತಿದ್ದು, ಅಗತ್ಯ ಕಂಡುಬಂದಲ್ಲಿ ಕ್ರಿಮಿನಲ್ ವಿಚಾರಣೆ ಕೂಡ ನಡೆಸಲಾಗುವುದು ಎಂದು ಹೇಳಿದರು.
ಕಪ್ಪುಹಣದ ವಿರುದ್ಧ ತೆಗೆದುಕೊಂಡ ಕ್ರಮಗಳು ಹಾಗೂ ಜನರ ಖಾತೆಗೆ ಕಪ್ಪು ಹಣದ ಹದಿನೈದು ಲಕ್ಷ ರುಪಾಯಿ ಜಮೆ ಮಾಡುವ ಬಗ್ಗೆ ನೀಡಿದ ಭರವಸೆ ಬಗ್ಗೆ ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗರ್ ವಾಲ್ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಸಚಿವ ಜೇಟ್ಲಿ, ನವೆಂಬರ್ 9,2016ರಿಂದ ಜನವರಿ 10,2017ರವರೆಗೆ 1,100ಕ್ಕೂ ಹೆಚ್ಚು ಶೋಧ ಕಾರ್ಯಾಚರಣೆಯನ್ನು ಐಟಿ ಅಧಿಕಾರಿಗಳು ನಡೆಸಿದ್ದಾರೆ.[ಹಳೇನೋಟು ಬದಲಿಸಲು ಅನಿವಾಸಿ ಭಾರತೀಯರಿಗೆ ಬಾಗಿಲು ತೆರೆದಿದೆ]
ಜತೆಗೆ ಅನುಮಾನಾಸ್ಪದವಾಗಿ ನಡೆದ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದ ಹಾಗೆ 5,100 ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟಾರೆ 610 ಕೋಟಿ ರುಪಾಯಿ ಮೌಲ್ಯದ ನಗದು-ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 513 ಕೋಟಿ ರುಪಾಯಿ ನಗದು ಸೇರಿದೆ. 110 ಕೋಟಿ ರುಪಾಯಿ ಹೊಸ ನೋಟು, ಲೆಕ್ಕಕ್ಕೆ ಕೊಡದಿದ್ದ 5400 ಕೋಟಿಗೂ ಹೆಚ್ಚು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ.