ಕಲಾವೈಭವದ ಸಿಂಚನದಲ್ಲಿ ಝಗಮಗಿಸಿದ ಸಂಸ್ಕೃತಿ ಉತ್ಸವ
ನವದೆಹಲಿ,ಮಾರ್ಚ್,12: ಹಲವು ಕಲಾ ತಂಡಗಳು, ಸಾವಿರಾರು ಕಲಾವಿದರು, ಝಗಮಗಿಸುವ ವೇದಿಕೆ, ವರುಣನ ಸಿಂಚನ, ಹೂವು, ವೈಭವೋಪೇತ ಶಿಲ್ಪಗಳಿಂದ ಸಿಂಗಾರಗೊಂಡ ಅನಾವರಣ, ನಾನಾ ಗಣ್ಯರ ಸಮಾಗಮ ಒಟ್ಟಿನಲ್ಲಿ ಅಲ್ಲೊಂದು ಸ್ವರ್ಗವೇ ನಿರ್ಮಾಣವಾಗಿತ್ತು.
ಯಮುನಾ ನದಿ ದಂಡೆಯ ಮೇಲೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನಡೆಸುತ್ತಿರುವ ಮೂರು ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಲಕ್ಷಾಂತರ ಜನರ ಸಮಾಗಮದಲ್ಲಿ ಮಳೆಯ ಸಿಂಚನದ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.
ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ನಡೆಸುತ್ತಿರುವ ಈ ಭವ್ಯ ಉತ್ಸವ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, 'ಮಾನವತೆ ಹಾಗೂ ಶಾಂತಿ ಮಂತ್ರವನ್ನು ಎತ್ತಿ ಹಿಡಿದರು. ಇಡೀ ವಿಶ್ವವೇ ಒಂದು ಕುಟುಂಬ, ಭಾರತ ತನ್ನ ಸಂಸ್ಕೃತಿ ಕಲಾವಂತಿಕೆಯಿಂದ ಜಗತ್ಪ್ರಸಿದ್ಧಗೊಂಡಿದೆ. ಇದು ನಾವು ಹೆಮ್ಮೆ ಪಡುವ ಸಂಗತಿ.[ದಂಡ ಕಟ್ಟಲು ನಕಾರ, ಜೈಲಿಗೆ ಹೋಗಲು ಸಿದ್ಧ: ಶ್ರೀಶ್ರೀ ರವಿಶಂಕರ್]
ಇತ್ತೀಚಿನ ದಿನಗಳಲ್ಲಿ ನಾವು ಕೇವಲ ಲಾಭ ನಷ್ಟ ಇವುಗಳಲ್ಲೇ ಕಾಲ ತಳ್ಳುತ್ತಿದ್ದೇವೆ. ಅದರ ಹೊರತಾಗಿ ಮಾನವೀಯತೆಯ ನೆಲೆಯಲ್ಲಿ ನಾವು ಚಿಂತಿಸಬೇಕು. ಮಾನವೀಯತೆಯಲ್ಲಿ ದೇಶದ ಶಕ್ತಿ ಅಡಗಿದೆ ಎಂಬುದನ್ನು ವಿಶ್ವಕ್ಕೆ ಸಾಬೀತು ಪಡಿಸಬೇಕು' ಎಂದು ಹೇಳಿದರು.[ವಿಶ್ವ ಸಾಂಸ್ಕೃತಿಕ ಉತ್ಸವದ ಇನ್ನಷ್ಟು ಚಿತ್ರಗಳು]
ಉತ್ಸವಕ್ಕೆ ಮಳೆಯ ಮೆರುಗು
ಮೂರು ದಿನಗಳ ಉತ್ಸವಕ್ಕೆ ಮಳೆಯೂ ತನ್ನ ಹನಿಗಳನ್ನು ಧರೆಗೆ ಸೋಕಿಸುವ ಮೂಲಕ ಪರೋಕ್ಷವಾಗಿ ಚಾಲನೆ ನೀಡಿತು. ಆ ಸಂದರ್ಭದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಜನರು ಸಾಹಸ ಪಟ್ಟರಾದರೂ ಒಟ್ಟಿನಲ್ಲಿ ವರುಣನ ಆಗಮನ ಎಲ್ಲರಲ್ಲೂ ಸಂತಸ ತಂದಿತ್ತು. ಮಳೆಯಿಂದ ಯುವಕ ಯುವತಿ ಗಜರಾಜನ ಬಳಿ ನಿಂತು ರಕ್ಷಣೆ ಪಡಯುತ್ತಿರುವ ದೃಶ್ಯ.
ಕಾರ್ಯಕ್ರಮದ ಪ್ರಸಾರ ಎಲ್ಲೆಲ್ಲಿ?
ವಿಶ್ವದ ನಾಯಕರು ಹಾಗೂ ಕಲಾವಿದರು ಪಾಲ್ಗೊಂಡಿರುವ ಈ ಉತ್ಸವವನ್ನು 134 ದೇಶಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. 12 ಸಾವಿರ ವೆಬ್ ಸೈಟ್ ಗಳಲ್ಲಿ ಮೂಡಿ ಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ನಮ್ಮನ್ನು ನಾವು ಟೀಕಿಸಿಕೊಂಡರೆ ನಾವು ಸಾಧನೆಯ ಹಾದಿ ಏರುವುದು ಕಷ್ಟ. ಹಾಗಾಗಿ ಯಾವುದೇ ಟೀಕೆ ಟಿಪ್ಪಣಿಗಳಿಗೆ ಬೆಲೆಕೊಡದೆ ನಮ್ಮದೇ ಆದ ನವ್ಯ ಆಲೋಚನೆಗಳೊಂದಿಗೆ ನಾವು ಪಯಣಿಸಬೇಕು ಎಂದು ಹೇಳಿದರು.
ಬೃಹತ್ ವೇದಿಕೆಯಲ್ಲಿ ಕೇರಳ ಕಲೆ
ಈ ಉತ್ಸವಕ್ಕೆ ಸಿದ್ದವಾದ ಬೃಹತ್ ವೇದಿಕೆಯು ಸುಮಾರು 7 ಎಕರೆ ಜಾಗ ಅಂದರೆ 6 ಫುಟ್ ಬಾಲ್ ಸ್ಟೇಡಿಯಂಗಳನ್ನು ಹೊಂದಬಲ್ಲಂತಹ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಇದರಲ್ಲಿ ಕೇರಳದ ಕಲಾವಿದರು ಕಾಣಿಸಿದ್ದು ಹೀಗೆ.
ಎಲ್ಲೆಲ್ಲಿಂದ ಕಲಾವಿದರು ಆಗಮಿಸಿದ್ದರು?
ಈ ಸಾಂಸ್ಕೃತಿಕ ಉತ್ಸವ ಗಣ್ಯರ ಸಮಾಗಮವಾಗಿತ್ತು. ಉತ್ಸವಕ್ಕೆ ಪಾಕಿಸ್ತಾನ, ಬ್ರೆಜಿಲ್, ಅರ್ಜೆಂಟೀನಾ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿರುವ 35 ಸಾವಿರ ಕಲಾವಿದರು ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಯಾವ ಯಾವ ಕಲೆಗಳು ಮೈದಳೆದಿತ್ತು?
ಇಲ್ಲಿನ ವೇದಿಕೆ ನಾನಾ ಕಲೆಗಳಿಗೆ ಸಾಕ್ಷಿಯಾಯಿತು. ಈ ಬೃಹತ್ ವೇದಿಕೆಯಲ್ಲಿ 1700 ಭರತನಾಟ್ಯ, 1700 ಕಥಕ್ ಕಲಾವಿದರು ನೃತ್ಯ ಮಾಡಿ ವೇದಿಕೆಯ ಸೊಬಗನ್ನು ಹೆಚ್ಚಿಸಿದರೆ, ಕೊಳಲು, ವೀಣೆ, ಸಿತಾರ್ ಹೀಗೆ 40 ಕ್ಕೂ ಹೆಚ್ಚು ಬಗೆಯ ವಾದ್ಯಗಳ ಕಲಾವಿದರು ಸಂಗೀತ ಸುಧೆ ಹರಿಸಿದರು.
ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದೇನು?
ನನಗೆ ಇಡೀ ವಿಶ್ವವೇ ಒಂದು ಕುಟುಂಬ, ವಸುದೈವ ಕುಟುಂಬಕಂ ಎಂದು ನಂಬಿರುವವನು ನಾನು. ಇದಕ್ಕೆ ಬದ್ಧನಾಗಿಯೇ ನಾನು ಕೆಲಸ ಮಾಡುತ್ತೇನೆ. ಕೆಲವರು ಈ ಉತ್ಸವವನ್ನು ಖಾಸಗಿ ಪಾರ್ಟಿ ಎಂದು ಜರಿದಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಮ್ಮ ಧಾಟಿಯಲ್ಲೇ ಉತ್ತರಿಸಿದರು.
ಭದ್ರತೆಗೆ ಎಷ್ಟು ಮಂದಿ ಪೊಲೀಸರು?
ಉತ್ಸವದಲ್ಲಿ ಭದ್ರತೆ ಕಾಯ್ದುಕೊಳ್ಳುವ ಸಲುವಾಗಿ 12 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಮುನಾ ನದಿ ದಂಡೆ ಮೇಲೆ ಮೂರು ಹಂತದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸಮಾರಂಭ ಸ್ಥಳದಲ್ಲಿ ಒಂದು ಮಾಸ್ಟರ್ ಕೊಠಡಿ ಹಾಗೂ ಐದು ನಿಯಂತ್ರಣ ಕೊಠಡಿಗಳಿವೆ. ಹಲವಾರು ಸಿಸಿಟಿವಿ ಅಳವಡಿಸಲಾಗಿದೆ.[ಆರ್ಟ್ ಆಫ್ ಲೀವಿಂಗ್ ಕಾರ್ಯಕ್ರಮದ ವೈಭವ ಇಲ್ಲಿದೆ ನೋಡಿ]