2019 ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಪತ್ತೆ ಮಾಡುವ EVMs!
ನವದೆಹಲಿ, ಜುಲೈ 11: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಪಂಚ ರಾಜ್ಯ ಚುನಾವಣೆಯ ನಂತರ ಅಭೂತಪೂರ್ವ ಜಯಗಳಿಸಿದ ಬಿಜೆಪಿ ಗೆಲುವನ್ನು ವಿಪಕ್ಷಗಳು ಮತಯಂತ್ರ(EVM)ದ ವೈಫಲ್ಯವೆಂದು ದೂರಿದ್ದು ಹಳೇ ವಿಷಯ. ನಂತರ ಚುನಾವಣಾ ಆಯೋಗವೇ ಈ ಆರೋಪ ಸುಳ್ಳು ಎಂದು ವಿಪಕ್ಷಗಳಿಗೆ ಛೀಮಾರಿ ಹಾಕಿದ್ದೂ ಆಗಿದೆ.
ಇನ್ನು ಮುಂದೆ ವಿವಿಟಿಎಟಿ ಮತಯಂತ್ರ ಬಳಕೆ: ಚುನಾವಣಾ ಆಯೋಗ
ಹೀಗಿರುವಾಗ ಇಂಥ ಆರೋಪಗಳು ಹುಟ್ಟಿಕೊಳ್ಳುವುದೇ ಬೇಡವೆಂದು ಚುನಾವಣಾ ವಿಧಾನವನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಸಲುವಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮವನ್ನು ಪತ್ತೆ ಮಾಡಬಲ್ಲ, ಮೂರನೇ ಜನರೇಶನ್ ಮತಯಂತ್ರ(M3)ವನ್ನು ಪರಿಚಯಿಸಲು ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ.
ಮೋದಿ ಅಲೆಯಲ್ಲ, ದೆಹಲಿ ಸೋಲಿಗೆ ಕಾರಣ EVM ಅಲೆ!
M3 ಇವಿಎಂ ತಯಾರಿಕೆಯ ಹೊಣೆಯನ್ನು ಎಲೆಕ್ಟ್ರಾನಿಕ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿ.(ECIL) ಮತ್ತು ಭಾರತ್ ಎಲೆಕ್ಟ್ರಾನಿಕ್ ಲಿ. (BEL) ಗೆ ವಹಿಸಲಾಗಿದ್ದು, ಇದೇ ಆಗಸ್ಟ್(2017) ನಿಂದ M3 ಇವಿಎಂ ತಯಾರಿಕೆಯ ಕೆಲಸ ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೇ ಆದರೆ 2018 ರ ಸೆಪ್ಟೆಂಬರ್ ಹೊತ್ತಿಗೆ M3 ಇವಿಎಂ ಗಳು ಕಾರ್ಯಯೋಗ್ಯವಾಗಲಿವೆ ಎಂದು ಮಾಜಿ ಚುನಾವಣಾ ಆಯುಕ್ತ ನಾಸಿಮ್ ಜೈದಿ ಹೇಳಿದ್ದಾರೆ.
ಹಳೆಯ ಇವಿಎಂ ಗಳು ನೇಪಥ್ಯಕ್ಕೆ!
ಈಗಾಗಲೇ ಉಪಯೋಗಿಸಲಾಗುತ್ತಿರುವ ಇವಿಎಂ ಗಳು ನೇಪಥ್ಯಕ್ಕೆ ಸರಿಯಲಿದ್ದು, ಆ ಜಾಗದಲ್ಲಿ ಹೊಸ M3 ಇವಿಎಂ ಗಳು ಲಗ್ಗೆ ಇಡಲಿವೆ. ಹೊಸ ಇವಿಎಂ ಜೊತೆಗೆ ವೋಟರ್ ವೆರಿಫೆಯಬಲ್ ಪೇಪರ್ ಆಡಿಟ್ ಟ್ರಯಲ್ ಸಿಸ್ಟಂ(VVPAT) ಗಳನ್ನೂ ಬಳಸಲಾಗುತ್ತದೆ. ಮತಚಲಾಯಿಸಿದ ವ್ಯಕ್ತಿಗೆ ತಾನು ಯಾವ ಅಭ್ಯರ್ಥಿಗೆ ಮತಚಲಾಯಿಸಿದ್ದೇನೋ ಆ ಮತ ಸರಿಯಾದ ಅಭ್ಯರ್ಥಿಯ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದು ಈ VVPAT ಮೂಲಕ ತಿಳಿಯಲಿದೆ.
ಮೋಸಪತ್ತೆ ಮಾಡಬಲ್ಲ ಮಷಿನ್!
M3 ಇವಿಎಂಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದ್ದು, ಯಾವುದೇ ರೀತಿಯ ಅಕ್ರಮ ಸಂಭವಿಸಿದರೂ ಈ ಮಷಿನ್ ಅದನ್ನು ಪತ್ತೆ ಮಾಡಬಲ್ಲದು. ಕಂಪ್ಯೂಟರಿನಲ್ಲಾಗಲೀ, ಅಥವಾ ಸಾಫ್ಟ್ ವೇರಿನಲ್ಲಾಗಲೀ ಏನಾದರೂ ದೋಷವಿದ್ದರೆ ಅದನ್ನು ಈ ಇವಿಎಂ ಪತ್ತೆ ಮಾಡಲಿದೆ.
ಇವಿಎಂ ಗೂ Z+ ಭದ್ರತೆ!
ಇವಿಎಂ ತಯಾರಾಗುವ ಸ್ಥಳ, ಅವುಗಳನ್ನು ಸಂಗ್ರಹಿಸುವ ಸ್ಥಳ, ನಿರ್ವಹಣೆ ಮತ್ತು ಅವುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ರವಾನಿಸುವ ಎಲ್ಲಾ ಕಡೆಗಳಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗುತ್ತದೆ. ಇವಿಎಂ ಅನ್ನು ರವಾನಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಅದರ ಚಲನವಲನದ ಬಗ್ಗೆ ಹದ್ದಿನ ಕಣ್ಣಿಡಲಾಗುತ್ತದೆ.
ಪಾರದರ್ಶಕತೆಗೆ ಒತ್ತು
ಹೊಸ ಇವಿಎಂ ನಿಂದಾಗಿ ಇವಿಎಂ ಅಕ್ರಮದ ಕುರಿತು ಯಾರೂ ದನಿ ಎತ್ತದ ಪರಿಸ್ಥಿತಿ ನಿರ್ಮಾಣವಾಗಲಿದೆ. ಚುನಾವಣೆಯಲ್ಲಿನ ಪಾರದರ್ಶಕತೆಯನ್ನು ಜನರು ಮೆಚ್ಚಲಿದ್ದಾರೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೂ, ಜನರಲ್ಲಿ ಚುನಾವಣಾ ವ್ಯವಸ್ಥೆಯ ಕುರಿತು ಭರವಸೆಯನ್ನು ಮೂಡಿಸುವ ಉದ್ದೇಶ ಇದರ ಹಿಂದಿದೆ. ಹೊಸ ಇವಿಎಂ ನಲ್ಲಿ ಮತ ಚಲಾಯಿಸುವುವದು ಹೇಗೆ ಎಂಬ ಬಗ್ಗೆ ಜನರಿಗೆ ಮೊದಲೇ ಮಾಹಿತಿ ನೀಡಲಾಗುವುದು ಎಂದು ಜೈದಿ ಹೇಳಿದ್ದಾರೆ.
ನಿದ್ದೆ ಕೆಡಿಸಿದ್ದ ಇವಿಎಂ ಆರೋಪ
ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ್ ರಾಜ್ಯಗಳಲ್ಲಿ ಚುನಾವಣೆಯ ಫಲಿತಾಂಶದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ ಪಿ ನಾಯಕಿ ಮಾಯಾವತಿ ಸೇರಿದಂತೆ ಹಲವು ನಾಯಕರು ಇವಿಎಂ ನಲ್ಲೇ ದೋಷವಿದೆ ಎಂದ್ದಿದ್ದರು. ತಮ್ಮ ಸೋಲಿನ ಹೊಣೆಯನ್ನು ಇವಿಎಂ ಗಳ ಮೇಲೆ ಹೇರಿದ್ದ ನಾಯಕರಿಗೆ ಚುನಾವಣಾ ಆಯೋಗ ಛೀಮಾರಿ ಹಾಕಿ, ಇಂಥ ಅಕ್ರಮ ನಡೆಯುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.