ಸುನಂದಾ ಪುಷ್ಕರ್ ಕೇಸ್: ಮೂವರಲ್ಲಿ ಸುಳ್ಳು ಹೇಳಿದ್ದು ಯಾರು?
ನವದೆಹಲಿ, ಮೇ.15: ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಸುನಂದಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ತರೂರ್ ಆಪ್ತಬಳಗದ ಮೂವರು ಸಾಕ್ಷಿಗಳ ಪೈಕಿ ಒಬ್ಬರು ಸುಳ್ಳು ಹೇಳಿರುವುದು ಪತ್ತೆಯಾಗಿದೆ.
ಪ್ರಕರಣದ ತನಿಖೆ ನಡೆಸುವಾಗ ಸಿಕ್ಕ ಶಂಕಿತರ ಹೆಸರು, ವಿವರಗಳಿದ್ದ ಸಂದೇಶಗಳು ಸುನಂದಾ ಫೋನಿನಲ್ಲಿತ್ತು. ಅದರೆ, ಈಗ ಎಲ್ಲವೂ ಡಿಲೀಟ್ ಆಗಿದೆ. ಇದು ಆಪ್ತರ ಕೈವಾಡ ಎಂದು ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಭಜರಂಗಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಎಲ್ಲರನ್ನು ಶಂಕಿತರ ಪಟ್ಟಿಗೆ ಸೇರಿಸಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. [ಸುನಂದಾ ಹತ್ಯೆ : ಕುರುಡು ಕಾಂಚಾಣದ ಕೈವಾಡ?]
ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳನ್ನು ಮುಚ್ಚಿ ಹಾಕಲು ಈ ಶಂಕಿತರು ಯತ್ನಿಸಿದ್ದಾರೆ. ಈ ಮೂವರಿಗೆ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ ತಿಳಿದಿದೆ ಎಂದು ದೆಹಲಿ ಪೊಲೀಸರು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.
ಘಟನೆ ನಡೆದ ದಿನ ಈ ಮೂವರು ಹೋಟೆಲ್ ನಲ್ಲಿದ್ದರು. ಲೋಧಿ ಗಾರ್ಡನ್ ಬಳಿ ತರೂರ್ ನೆಲೆಸಿದ್ದರು. ಮನೆ ರಿಪೇರಿ ನೋಡಿಕೊಳ್ಳುತ್ತಿದ್ದೆ ಎಂದು ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ.ದೆಹಲಿಗೆ ಸುನಂದಾ ಕಾಲಿಡುವುದಕ್ಕೂ ಮುನ್ನವೇ ಮನೆ ರಿಪೇರಿ ಕಾರ್ಯ ಮುಗಿದಿತ್ತು ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. [ಬಟ್ಟೆ, ಶೂ ಹೊರಸಾಗಿಸಿದ್ದು ಯಾರು?]
ಸುನಂದಾ ಪುಷ್ಕರ್ ಬಳಸುತ್ತಿದ್ದ ಲ್ಯಾಪ್ ಟಾಪ್ ನಲ್ಲಿದ್ದ ಕೆಲವು ಮಹತ್ವದ ದಾಖಲೆಗಳು, ಆಕೆ ಬಳಸಿದ್ದ ಇಮೇಲ್ ಐಡಿಯಿಂದ ಕಳಿಸಿದ ಕೆಲವು ಸಂದೇಶಗಳು ಡಿಲೀಟ್ ಆಗಿರುವುದು ಕಂಡು ಬಂದಿದೆ. ಇದು ಯಾರ ಕೈವಾಡ ಎಂಬುದರ ತನಿಖೆ ನಡೆಯುತ್ತಿದೆ.
ಸುನಂದಾ ಮೈಮೇಲೆ ಆಗಿದ್ದ ಗಾಯದ ಬಗ್ಗೆ ಈ ಮೂವರು ಸರಿಯಾದ ವಿವರಣೆ ನೀಡಿಲ್ಲ. ರೂಮಿನ ಲೈಟ್ ಆಫ್ ಆಗಿತ್ತಾ, ಕೊನೆಯದಾಗಿ ಯಾರು ರೂಮಿನೊಳಗೆ ಹೋಗಿದ್ದರು ಎಂಬುದರ ಬಗ್ಗೆ ಶಂಕಿತರು ಬಾಯ್ಬಿಟ್ಟಿಲ್ಲ.ಇಡೀ ಕೃತ್ಯ ಪೂರ್ವ ನಿಯೋಜಿತವಾಗಿದ್ದು, ಶಂಕಿತರು ಅದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. (ಒನ್ ಇಂಡಿಯಾ ಸುದ್ದಿ)