ಉಗ್ರರ ದಾಳಿಯಲ್ಲಿ ಯೋಧ ಸಾವು, ಎಂಟು ಮಂದಿಗೆ ಗಾಯ
ನವದೆಹಲಿ, ಅಕ್ಟೋಬರ್ 15: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ ಹೊರವಲಯದ ಜಕುರಾ ಪ್ರದೇಶದಲ್ಲಿ ಶುಕ್ರವಾರ ಉಗ್ರರ ದಾಳಿಗೆ ಸಶಸ್ತ್ರ ಸೀಮಾ ಬಲದ ಒಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬ ಪೊಲೀಸ್ ಕೂಡ ಇದ್ದಾರೆ. ಸಶಸ್ತ್ರ ಸೀಮಾ ಬಲದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಕರ್ತವ್ಯ ಮುಗಿಸಿಕೊಂಡು ಕ್ಯಾಂಪ್ ಗೆ ಹಿಂತಿರುಗುವಾಗ ಉಗ್ರರು ದಾಳಿ ನದೆಸಿದ್ದಾರೆ ಎಂದು ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಬ್ಬ ಯೋಧ ಮೃತಪಟ್ಟು, ಎಂಟು ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಒಬ್ಬ ಪೊಲಿಸ್ ಸೇರಿದಂತೆ ಗಾಯಗೊಂಡವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.[ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ದಾಳಿ: ಮೂವರು ಉಗ್ರರ ಹತ್ಯೆ]
ರಕ್ಷಣಾ ಪಡೆಯವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಉಗ್ರಗಾಮಿಗಳ ಶೋಧಕ್ಕಾಗಿ ಕಾರ್ಯಾಚರಣೆ ಆರಂಭಿಸಿದರು. ಆಗಸ್ಟ್ 15ರಂದು ನೌಹಟ್ಟಾದಲ್ಲಿ ಎನ್ ಕೌಂಟರ್ ಆದ ನಂತರ ನಗರದಲ್ಲಿ ನಡೆಯುತ್ತಿರುವ ಮೊದಲ ಉಗ್ರ ದಾಳಿ ಇದು. ಈ ಹಿಂದಿನ ದಾಳಿಯಲ್ಲಿ ಸಿಆರ್ ಪಿಎಫ್ ಕಮಾಂಡೆಂಟ್ ಮೃತಪಟ್ಟು, ಒಂಬತ್ತು ಯೋಧರು ಗಾಯಗೊಂಡಿದ್ದರು.[ಹೆದ್ದಾರಿಗಳಲ್ಲಿ ಆತಂಕ ಸೃಷ್ಟಿ- ಉಗ್ರರ ಹೊಸ ಸಂಚು]
ಭಾರತ ಸೇನೆ ಸರ್ಜಿಕಲ್ ದಾಳಿ ನಡೆಸಿದ ನಂತರ ಉಗ್ರರ ದಾಳಿ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆ ಯೋಧರು ತಕ್ಕ ಉತ್ತರ ನೀಡುತ್ತಿದ್ದಾರೆ.