ವಿಡಿಯೋ: ವಿದ್ಯಾರ್ಥಿ ಮೇಲೆ ಸಹಪಾಠಿಗಳ ಹಲ್ಲೆ: ಪ್ರಿನ್ಸಿಪಲ್ ಅಮಾನತು
ನವದೆಹಲಿ: ಅಕ್ಟೋಬರ್, 20: ಬಿಹಾರದ ಮುಜಫರ್ ಪುರ್ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿಗಳು ಹಲ್ಲೆ ನಡೆಸಿದ ಪ್ರಕರಣದಲ್ಲಿ ವಿದ್ಯಾಲಯದ ಪ್ರಿನ್ಸಿಪಲ್ ಅಮಾನತುಗೊಳಿಸಿ ಮತ್ತು 15 ಶಿಕ್ಷಕನ್ನು ವರ್ಗಾವಣೆಗೊಳಿಸಿ ವಿದ್ಯಾಲಯ ಆದೇಶ ಹೊರಡಿಸಿದೆ.
ಅಷ್ಟೇ ಅಲ್ಲದೇ ಹಲ್ಲೆ ನಡೆಸಿದ ಇಬ್ಬರು ವಿದ್ಯಾರ್ಥಿಗಳಿಗೂ ಶಿಕ್ಷೆ ನೀಡುವ ಕುರಿತು ಕೇಂದ್ರೀಯ ವಿದ್ಯಾಲಯ ಸಂಘಟನೆ ನಿರ್ಧರಿಸಿದೆ.
ಆಗಸ್ಟ್ 25ರಂದು ಕೇಂದ್ರಿಯ ವಿದ್ಯಾಲಯದ 7 ವಿದ್ಯಾರ್ಥಿಗಳು ತಮ್ಮ ಸಹಪಾಠಿಯೊಬ್ಬನನ್ನು ತರಗತಿ ಕೊಠಡಿಯಲ್ಲೇ ಮನಬಂದಂತೆ ಥಳಿಸಿದ್ದರು. ವಿದ್ಯಾರ್ಥಿಗಳು ಥಳಿಸುತ್ತಿರುವ ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಘಟನೆ ಬೆಳಕಿಗೆ ಬರುತ್ತಿದ್ಧಂತೆ ವಿದ್ಯಾಸಂಸ್ಥೆ ಎಚ್ಚೆತ್ತುಕೊಂಡಿದ್ದು, ತನಿಖೆ ಆರಂಭಿಸಿ. ಶಾಲೆಯ ಪ್ರಾಂಶುಪಾಲ ಸೇರಿದಂತೆ ಇತರೆ 13 ಮಂದಿ ಶಿಕ್ಷಕರು ಮತ್ತು ಒಬ್ಬ ಸಹಾಯಕನನ್ನು ವರ್ಗಾವಣೆಗೊಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಿದ್ಯಾಲಯ " ಘಟನೆ ಸಂಬಂಧ ಸಹಪಾಠಿ ಮೇಲೆ ಹಲ್ಲೆ ನಡೆಸಿರುವ 11 ಮತ್ತು 12ನೇ ತರಗತಿಯ ಇಬ್ಬರು ಪ್ರಮುಖ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಕಲಾಗಿದೆ ಎಂದು ತಿಳಿಸಿದೆ.
ವಿದ್ಯಾಲಯದ ಪ್ರಾಂಶುಪಾಲ ರಾಜೀವ್ ರಂಜನ್ ಅವರನ್ನು ಅಮಾನತು ಮಾಡಲಾಗಿದೆ. ಉಪಪ್ರಾಂಶುಪಾಲ ಮತ್ತು ಇತರೆ 13ಮಂದಿ ಶಿಕ್ಷಕರು ಸೇರಿದಂತೆ ಒಬ್ಬ ಸಹಾಯಕ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದ ಮೇಲೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಯನ್ನು ಥಳಿಸುತ್ತಿದ್ದರೂ ಸಮ್ಮನೆ ನೋಡಿಕೊಂಡು ನಿಂತಿದ್ದ ಇತರೆ ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳುವ ಕುರಿತು ವಿದ್ಯಾಲಯ ಯಾವುದೇ ಮಾಹಿತಿ ನೀಡಿಲ್ಲ.
ಆಗಸ್ಟ್ 25ರಂದು ಊಟದ ವಿರಾಮದಲ್ಲಿ ಈ ಘಟನೆ ನಡೆದಿದೆ ಎಂಬುದನ್ನು ವಿದ್ಯಾಲಯ ತನಿಖಾ ಸಮಿತಿ ದೃಢಪಡಿಸಿದೆ. ಹಲ್ಲೆ ಮಾಡಿರುವ ವಿದ್ಯಾರ್ಥಿಗಳು ಸಹೋದರರಾಗಿದ್ದು, ಇಬ್ಬರೂ ತರಗತಿಯನ್ನು ಖಾಲಿ ಮಾಡಿಸಿ ವಿದ್ಯಾರ್ಥಿಯನ್ನು ಥಳಿಸಿದ್ದಾರೆ.
ಇನ್ನು ವಿಡಿಯೋವನ್ನು ಆಕಸ್ಮಿಕವಾಗಿ ಸೆರೆಹಿಡಿದಿಲ್ಲ. ವಿದ್ಯಾರ್ಥಿಯನ್ನು ಥಳಿಸುವ ಬಲವಾದ ಉದ್ದೇಶದಿಂದ ಪೂರ್ವಯೋಜಿತವಾಗಿ ಪ್ಲ್ಯಾನ್ ಮಾಡಿ, ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲಾಗಿದೆ. ಸಾಲದೆಂಬಂತೆ ಉದ್ದೇಶಪೂರ್ವಕವಾಗಿ ಅದನ್ನು ಸೆರೆಹಿಡಿಯಲಾಗಿದೆ ಎಂದು ತನಿಖಾ ಸಮಿತಿ ತಿಳಿಸಿದೆ.