ಗೋಹತ್ಯೆ ನಿಷೇಧ ಕುರಿತು ಸುಪ್ರೀಂನಲ್ಲಿಂದು ವಿಚಾರಣೆ
ನವದೆಹಲಿ, ಜೂನ್ 15: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಗೋಹತ್ಯೆ ನಿಷೇಧದ ಕುರಿತ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಸಂಬಂಧಿಸಿದಂತೆ ಹೈದರಾಬಾದಿನ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯನ್ನು ಇಂದು(ಜೂನ್ 15) ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಗೋ ಹತ್ಯೆ ನಿಷೇಧ: ಜೂ. 15ರಂದು ಸುಪ್ರೀಂ ತೀರ್ಪು
ಜಾನುವಾರು ಮಾರಾಟ ಮತ್ತು ಗೋಹತ್ಯೆ ನಿಷೇಧ ಮಾಡುವುದರಿಂದ ಅದನ್ನೇ ಆದಾಯದ ಮೂಲವನ್ನಾಗಿ ನಂಬಿಕೊಂಡ ಲಕ್ಷಾಂತರ ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ ಎಂದು ಹೈದರಾಬಾದ್ ಮೂಲದ ವಕೀಲ ಫಾಹಿಮ್ ಖುರೇಶಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಮೇ 25 ರಂದು ಕೇಂದ್ರ ಸರ್ಕಾರ ಕೊಲ್ಲುವ ಉದ್ದೇಶಕ್ಕಾಗಿ ಜಾನುವಾರು ಮಾರಾಟಮಾಡುವುದನ್ನು ನಿಷೇಧಿಸಬೇಕೆಂದು ಹೇಳಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರದ ಕುರಿತು ರಾಷ್ಟ್ರದ ಹಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿಸ ಗೋಮಾಂಸ ಭಕ್ಷಣೆ ಮಾಡುವ 'ಬೀಫ್ ಫೆಸ್ಟ್' ಅನ್ನೂ ಹಲವೆಡೆ ಆಚರಿಸಲಾಗಿತ್ತು, ಸಾರ್ವಜನಿಕವಾಗಿ ಹಸುವನ್ನು ಸಾಯಿಸುವ ಮೂಲಕವೂ ಕೇರಳದಲ್ಲಿ ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest
ಆಹಾರ ಪದ್ಧತಿಯ ಮೇಲೆ ಕಾನೂನು ಹೇರುವ ಅಧಿಕಾರ ಯಾರಿಗೂ ಇಲ್ಲ ಎಂದು ಗೋಮಾಂಸಪ್ರಿಯರು ಕೇಂದ್ರ ಸರ್ಕಾರದ ವಿರುದ್ಧ ಈಗಲೂ ಕಿಡಿ ಕಾರುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯ ನಡುವೆಯೇ ಹೈದರಾಬಾದಿನ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.