ಸಲ್ಲೇಖನ ವ್ರತ: ರಾಜಸ್ಥಾನ ಹೈಕೋರ್ಟ್ ತೀರ್ಪು ತಡೆಹಿಡಿದ ಸುಪ್ರೀಂ
ನವದೆಹಲಿ, ಆಗಸ್ಟ್, 31 : ಜೈನರ ಪವಿತ್ರ ಆಚರಣೆಯಾದ ಸಲ್ಲೇಖನ ವ್ರತದ ಮೇಲೆ ನಿಷೇಧ ಹೇರಿದ್ದ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು, ಸುಪ್ರೀಂ ಕೋರ್ಟ್ ಸೋಮವಾರ ತಡೆ ಹಿಡಿದಿದೆ.
ಜೈನ ಸಮುದಾಯದ ಸಲ್ಲೇಖನವನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಅದನ್ನು ಅಪರಾಧ ಎಂದು ರಾಜಸ್ಥಾನ ಹೈಕೋರ್ಟ್ ಕೆಲವು ದಿನಗಳ ಹಿಂದೆ ಇದರ ಮೇಲೆ ನಿಷೇಧ ಹೇರಿತ್ತು. ಸಲ್ಲೇಖನ ವ್ರತ ಕೈಗೊಳ್ಳುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಘೋಷಿಸಿತ್ತು.[ಜೈನರ ಸಲ್ಲೇಖನ ವ್ರತ ಕಾನೂನುಬಾಹಿರ ಆಚರಣೆಯಂತೆ!]
ಜೈನರ ಹೋರಾಟದ ಸರಣಿ ಮುಂದುವರೆಯುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಪರಾಮರ್ಶಿಸಲು ಒಪ್ಪಿಗೆ ನೀಡಿದ್ದು, ಕೇಂದ್ರ ಹಾಗೂ ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ದೀಕ್ಷೆ ಸ್ವೀಕರಿಸಿದ ವ್ಯಕ್ತಿಯು ತನ್ನ ಇಚ್ಛೆಗೆ ಅನುಗುಣವಾಗಿ ನೀರು ಆಹಾರಾದಿಗಳನ್ನು ಬಿಟ್ಟು ಮೋಕ್ಷ ಪ್ರಾಪ್ತಿಗಾಗಿ ಹಂಬಲಿಸುತ್ತಾ ಜೀವ ತ್ಯಾಗ ಮಾಡುವ ಸಲ್ಲೇಖನ ವ್ರತವನ್ನು ಆತ್ಮಹತ್ಯೆ ಎಂದು ಪರಿಗಣಿಸಿ ರಾಜಸ್ಥಾನ ಹೈಕೋರ್ಟ್ ಆಗಸ್ಟ್ 10ರಂದು ತೀರ್ಪನ್ನು ನೀಡಿತ್ತು.
ಈ ತೀರ್ಪನ್ನು ಖಂಡಿಸಿ ಜೈಪುರ, ಬೆಂಗಳೂರು ಇನ್ನಿತರ ಪ್ರದೇಶದ ಲಕ್ಷಾಂತರ ಜೈನರು ದೇಶಾದ್ಯಂತ ಪ್ರತಿಭಟನೆ ಕೈಗೊಂಡು ತಿರ್ಪನ್ನು ವಾಪಾಸು ತೆಗೆದುಕೊಳ್ಳಬೇಕೆಂದು ಒತ್ತಾಯ ಪಡಿಸಿದ್ದರು.