ಸುಪ್ರೀಂಕೋರ್ಟಿನಿಂದ ಕೇಂದ್ರ ಸಚಿವ ಡಿವಿಎಸ್ ಗೆ ರಿಲೀಫ್
ನವದೆಹಲಿ, ನ.27: ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಹಾಗೂ ಭೂಮಿ ಖರೀದಿಸಿದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಸುಪ್ರೀಂಕೋರ್ಟಿನಿಂದ ಶುಭ ಸುದ್ದಿ ಸಿಕ್ಕಿದೆ.
ಐದು ಅಂತಸ್ತಿನ ಕಟ್ಟಡ ನಿರ್ಮಾಣ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಡಿವಿ ಸದಾನಂದ ಗೌಡ ಹಾಗೂ ಅವರ ಪತ್ನಿ ಡಾಟಿ ಸದಾನಂದಗೌಡ ಮತ್ತು ಮಾಜಿ ಸಚಿವ ಡಿಎನ್ ಜೀವರಾಜ್ ಅವರು ಕೂಡಾ ಈ ಪ್ರಕರಣದ ಆರೋಪಿಗಳಾಗಿದ್ದಾರೆ. 2012ರಲ್ಲಿ ಎಲ್ಲರ ವಿರುದ್ದ ತನಿಖೆ ಹಾಗೂ ವಿವಾದಿತ ಕಟ್ಟಡವನ್ನು ವಶಕ್ಕೆ ಪಡೆಯುವಂತೆ ಸ್ಥಳೀಯ ಆಡಳಿತ ಸಂಸ್ಥೆಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಆದೇಶಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ.
ಏನಿದು ಪ್ರಕರಣ?: ಜಿ-ಕೆಟಗರಿ (ಮುಖ್ಯಮಂತ್ರಿ ವಿವೇಚನಾ) ಕೋಟಾದಡಿ ನಗರದ ಎಚ್ಎಸ್ಆರ್ ಲೇಔಟ್ ಮೂರನೆ ಹಂತದ ಯಲ್ಲಗುಂಟೆಯಲ್ಲಿ 50-80 ಅಡಿ ವಿಸ್ತೀರ್ಣದ ಜಿ ಕೆಟಗರಿ ನಿವೇಶನವನ್ನು 2007ರ ಫೆ.2ರಂದು ಸದಾನಂದ ಗೌಡರಿಗೆ ಬಿಡಿಎ ಮಂಜೂರು ಮಾಡಿತ್ತು. ಈ ನಿವೇಶನದ ಪಕ್ಕದಲ್ಲಿಯೇ ಸಚಿವ ಜೀವರಾಜ್ ಅವರಿಗೂ ನಿವೇಶನ ಮಂಜೂರು ಮಾಡಿತ್ತು.
ಆದರೆ, ಸದಾನಂದ ಗೌಡರು ನಿಯಮ ಉಲ್ಲಂಘಿಸಿ, ತಮ್ಮ ಹಾಗೂ ಜೀವರಾಜ್ರ ನಿವೇಶನವನ್ನು ಒಂದು ಮಾಡಿ ಐದು ಮಹಡಿಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಕಟ್ಟಡದ ಮೊದಲನೆ ಎರಡು ಮಹಡಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿದ್ದು, ಮೂರು ಮತ್ತು ನಾಲ್ಕನೆ ಮಹಡಿಗಳು ನಿರ್ಮಾಣ ಹಂತದಲ್ಲಿದೆ ಎಂದು ಆರೋಪಿಸಿ ಪತ್ರಕರ್ತೆ ಕೆ.ಜಿ. ನಾಗಲಕ್ಷ್ಮಿ ಬಾಯಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸದಾನಂದಗೌಡ ಅವರು 1998ರಲ್ಲಿ ಪುತ್ತೂರಿನಲ್ಲಿ 10 ಸೆಂಟ್ ನಿವೇಶನವನ್ನು ಅಕ್ರಮವಾಗಿ ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರು ಹೊರ ವಲಯದ ಬಾಗಲೂರು ಬಳಿ 7.5 ಗುಂಟೆ ಜಮೀನು ಖರೀದಿಸಿದ್ದಾರೆ. ಇದು ಗೋಮಾಳಕ್ಕೆ ಸೇರಿದ ಭೂಮಿ. ಭೂ ಪರಿವರ್ತನೆ ಮಾಡಿಕೊಳ್ಳದೆಯೇ ಇಲ್ಲಿ ಮನೆ ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು
ಅಲ್ಲದೆ,ಸಂಸದರಾಗಿದ್ದಾಗ, ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಪಡೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ಎಚ್.ಎಸ್.ಆರ್.ಬಡಾವಣೆಯಲ್ಲಿ ತಮ್ಮ ಪತ್ನಿ ಡಾಟಿ ಅವರ ಹೆಸರಲ್ಲಿ ಮನೆ ಹೊಂದಿರುವ ಅಂಶವನ್ನು ಪ್ರಸ್ತಾಪಿಸಿಲ್ಲ. ಸುಳ್ಳು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಅಧಿಕಾರ ಎಂದು ದೂರಿದ್ದಾರೆ.