ಕೇಂದ್ರ ಬಜೆಟ್ ಗೆ ಆರೆಸ್ಸೆಸ್ ಕಾರ್ಮಿಕ ವಿಭಾಗದ ಬಿಎಂ ಎಸ್ ಅಸಮಾಧಾನ
ನವದೆಹಲಿ, ಫೆಬ್ರವರಿ 1: ಕೇಂದ್ರ ಬಜೆಟ್ ಅನ್ನು ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಬುಧವಾರ ನಿರಾಶೆಯಿಂದ ಕೂಡಿದ್ದು ಎಂದು ಬಣ್ಣಿಸಿದೆ. ಬಜೆಟ್ ನಲ್ಲಿ ಕಾರ್ಮಿಕರು, ಸಂಬಳ ಪಡೆಯುವ ವರ್ಗ ಹಾಗೂ ಬಡವರನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಲಾಗಿದೆ. ಭಾರತೀಯ ಮಜ್ದೂರ್ ಸಂಘ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಮಿಕ ವಿಭಾಗ.
ಬಜೆಟ್ ಅನ್ನು ಪುನರ್ ವಿಮರ್ಶಿಸಬೇಕು ಎಂದು ಕೂಡ ಆಗ್ರಹಿಸಲಾಗಿದೆ. "ಅಸಂಘಟಿತ ವಲಯ, ಯೋಜನೆಗೆ ಕೆಲಸ ಮಾಡುವ ಉದ್ಯೋಗಿಗಳು, ಕಾರ್ಮಿಕರಿಗೆ ಸಂಬಂಧಿಸಿದ ವಿಚಾರಗಳು, ಅವರ ಗೌರವಧನ ಹೆಚ್ಚಳ ಮತ್ತು ಸಾಮಾಜಿಕ ಭದ್ರತೆ ಈ ಎಲ್ಲ ವಿಚಾರಗಳನ್ನು ನಿರ್ಲಕ್ಷಿಸಲಾಗಿದೆ" ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿರ್ಜೇಶ್ ಉಪಾಧ್ಯಾಯ್ ಹೇಳಿದ್ದಾರೆ.[ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?]
ಬಜೆಟ್ ವಿರುದ್ಧ ಪ್ರದರ್ಶನಗಳನ್ನು ಆಯೋಜಿಸಲು ಸಹವರ್ತಿ ಸಂಘಗಳಿಗೆ ಬಿಎಂಎಸ್ ಸೂಚನೆ ನೀಡಿದೆ. ಬಜೆಟ್ ಪ್ರಸ್ತಾವಗಳನ್ನು ಪುನರ್ ಪರಿಶೀಲಿಸಲು ಆಗ್ರಹಿಸಿದೆ. ವಿತ್ತ ಸಚಿವರು ತಿಳಿಸಿದ್ದ ಉದ್ದೇಶಗಳನ್ನು ಈಡೇರಿಸಲು ಬಜೆಟ್ ವಿಫಲವಾಗಿದೆ ಎಂದು ಉಪಾಧ್ಯಾಯ್ ಹೇಳಿದ್ದಾರೆ.
ಅಪನಗದೀಕರಣದಿಂದ ತುಂಬ ದೊಡ್ಡ ಮೊತ್ತ ಸಂಗ್ರಹವಾಗಿದೆ. ಆದರೆ ಆದನ್ನು ಸಾಮಾಜಿಕ ಕಾರ್ಯಗಳಿಗೆ ವ್ಯಯ ಮಾಡಲು ಬಳಸುತ್ತಿಲ್ಲ. ಅಪನಗದೀಕರಣದ ಕಾರಣಕ್ಕೆ ಪಟ್ಟಣದಿಂದ ಗ್ರಾಮೀಣ ಪ್ರದೇಶಕ್ಕೆ ವಲಸೆ ಹೋಗುತ್ತಿರುವ ಸಮಸ್ಯೆಗೆ ಪರಿಹಾರ ಸೂಚಿಸಿಲ್ಲ ಎಂದು ಹೇಳಿದ್ದಾರೆ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]
ನರೇಗಾ ಯೋಜನೆಗೆ ಹೆಚ್ಚಿನ ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟಿದ್ದರೂ ಅಪನಗದೀಕರಣದಿಂದ ಸೃಷ್ಟಿಯಾಗುತ್ತಿರುವ ನಿರುದ್ಯೋಗದ ಕಾರಣಕ್ಕೆ ವಲಸೆ ಹೋಗುತ್ತಿರುವವರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜತೆಗೆ ವೇತನ ಪಡೆಯುವ ವರ್ಗದವರಿಗೆ ತೆರಿಗೆ ವಿನಾಯಿತಿ ಕೂಡ ನಿರೀಕ್ಷೆಯಷ್ಟು ನೀಡಿಲ್ಲ ಎಂದಿದ್ದಾರೆ.