ಗೋಹತ್ಯೆ ನಿಷೇಧಕ್ಕೆ ಕಾನೂನು ರೂಪಿಸಿ: ಮೋಹನ್ ಭಾಗವತ್
ನವದೆಹಲಿ, ಏಪ್ರಿಲ್. 09 : ದೇಶದಾದ್ಯಂತ ಗೋಹತ್ಯೆ ನಿಷೇಧಿಸಿ ಕಾನೂನು ರೂಪಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜೈನ ತೀರ್ಥಂಕರ ಮಹಾವೀರ ಅವರ ಜನ್ಮ ದಿನದ ನಿಮಿತ್ತ ದೆಹಲಿಯಲ್ಲಿ ಕಾರ್ಯಕ್ರಮವೊಂದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿದರು. [ಮುಸ್ಲಿಮರೂ ಸೇರಿ ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು: ಭಾಗವತ್]
'ಕಾನೂನನ್ನು ಪಾಲಿಸುವ ಮೂಲಕ ಗೋ ರಕ್ಷಣೆಯ ಕಾರ್ಯ ಆಗಬೇಕಿದೆ. ಗೋಹತ್ಯೆ ವಿಷಯಕ್ಕೆ ಸಂಬಂಧಿಸಿ ನಡೆಯುತ್ತಿರುವ ಹಿಂಸಾಚಾರ ಮೂಲೋದ್ದೇಶವನ್ನು ಕೆಡಿಸುತ್ತಿದೆ'ಎಂದರು.
ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ರೈತ ಪೆಹ್ಲು ಖಾನ್ ಎಂಬುವವರ ಮೇಲೆ ಇತ್ತೀಚೆಗೆ ಹಲ್ಲೆ ಮಾಡಿದ ವಿಷಯ ವಿವಾದಕ್ಕೀಡಾಗಿರುವ ಮಧ್ಯೆಯೇ ಭಾಗವತ್ ಈ ಹೇಳಿಕೆ ನೀಡಿದ್ದಾರೆ.
ಹಲ್ಲೆಗೊಳಗಾಗಿದ್ದ ಖಾನ್ ನಂತರ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನುಳಿದ 10 ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.