ರಾಹುಲ್ ಗಾಂಧಿ ಬ್ರಾಂಡ್ ಇಮೇಜ್ ಮರುಕಟ್ಟುವ ಕಸರತ್ತು
ಪ್ರಶಾಂತ್ ಕಿಶೋರ್ ರಂಥ ಚಾಲಾಕಿಯಿಂದ ಚುನಾವಣಾ ಸ್ಟ್ರಾಟೆಜಿ ರೂಪಿಸಿದರೂ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿದ್ದು ಪಕ್ಷಕ್ಕೆ ಭಾರೀ ತಲೆನೋವು ತಂದಿದೆ. ರಾಹುಲ್ ಈನಿಟ್ಟಿನಲ್ಲಿ ಚುನಾವಣೆ ಗೆದ್ದುಕೊಡುವಂಥ ಯುವಪಡೆಯನ್ನು ಕಟ್ಟಬೇಕಿದೆ. ಇದು ಸಾಧ್ಯವೆ?
ನವದೆಹಲಿ, ಮಾರ್ಚ್ 24 : ರಾಹುಲ್ ಗಾಂಧಿ ಅವರು ಇತ್ತೀಚೆಗೆ ಹಲವಾರು ಚುನಾವಣೆಗಳನ್ನು ಸೋತಿರಬಹುದು, ಆದರೆ ಎಷ್ಟೇ ಅಳೆದು, ತೂಗಿ, ಸೋಸಿ ನೋಡಿದರೂ ಕಾಂಗ್ರೆಸ್ ಪಕ್ಷದಲ್ಲಿ ಅವರಿಗಿಂತ ಸಮರ್ಥ ನಾಯಕರಾರೂ ಇಲ್ಲ ಎಂಬುದು ಪಕ್ಷದ ನಾಯಕರಿಗೇ ಮನವರಿಕೆಯಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್, ಮಿಲಿಂದ್ ದೇವೋರಾ, ಪ್ರಿಯಾಂಕಾ ಗಾಂಧಿಯಂಥ ನೇತಾರರೂ ಇದ್ದರೂ ಎಲ್ಲರೂ ಕಡೆಗೆ ನೋಡುವುದು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರತ್ತಲೇ. ಅಧ್ಯಕ್ಷೆ ಸೋನಿಯಾ ಅನಾರೋಗ್ಯಕ್ಕೀಡಾಗಿರುವುದರಿಂದ ಸಹಜವಾಗಿ ಎಲ್ಲರ ಚಿತ್ತ ರಾಹುಲ್ ಅವರತ್ತಲೇ ಹೊರಳುತ್ತಿದೆ. [ರಾಹುಲ್ ಒಬ್ಬ ಪಾರ್ಟ್ ಟೈಮ್ ರಾಜಕಾರಣಿ: ಕೃಷ್ಣ ವ್ಯಂಗ್ಯ]
ಇತ್ತೀಚಿನ ಹಲವಾರು ಸೋಲುಗಳಿಗಾಗಿ ರಾಹುಲ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದ್ದರೂ, ಸಮಸ್ಯೆಗಳಿರುವುದು ರಾಹುಲ್ ಗಾಂಧಿ ಅವರಲ್ಲಿ ಇಲ್ಲವೇ ಇಲ್ಲ, ಬದಲಾಗಿ ಅವರು ಕಟ್ಟಿರುವ ತಂಡದಲ್ಲಿ, ತಂಡದಲ್ಲಿರುವ ಸದಸ್ಯರಲ್ಲಿ ಎಂಬುದು ದೆಹಲಿಯ ತುಘಲಕ್ ರಸ್ತೆಯ ಅವರ ನಿವಾಸದಿಂದ ತೂರಿಬರುತ್ತಿರುವ ಮಾತು.
ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋನಿಯಾ ಗಾಂಧಿ ಅವರನ್ನು ಕರೆದುಕೊಂಡು ರಾಹುಲ್ ಗಾಂಧಿ ಅವರು ಭಾರತಕ್ಕೆ ವಾಪಸ್ ಆಗಿದ್ದಾರೆ. ಬರುತ್ತಲೇ 'ಶುದ್ಧಿ'ಯ ಅಭಿಯಾನ ಕಾಂಗ್ರೆಸ್ ಪಕ್ಷದಲ್ಲಿ ಆರಂಭವಾಗಲಿದೆ. ಜೊತೆಗೆ ರಾಹುಲ್ ಅವರ ಬ್ರಾಂಡ್ ಇಮೇಜ್ ರಿಬಿಲ್ಡ್ ಮಾಡುವ ಕಾರ್ಯಾಚರಣೆಯೂ ಶುರುವಾಗಲಿದೆ. [ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]
ಯುಪಿ ಸೋಲಿಗೆ ಆತ್ಮವಿಮರ್ಶೆ ಆರಂಭ
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಡನೆ ಕೈಜೋಡಿಸಿದ್ದರೂ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಉಂಡಿರುವುದು (105ರಲ್ಲಿ ಗೆದ್ದಿದ್ದು ಕೇವಲ 7 ಸ್ಥಾನ ಮಾತ್ರ) ಪಕ್ಷದ ಒಳಸ್ತರಗಳಲ್ಲಿ ಭಾರೀ ಅಸಮಾಧಾನವಂತೂ ಭುಗಿಲೆದ್ದಿದೆ. ಹಲವಾರು ನಾಯಕರು ಬಿಳಿಟೋಪಿ ಧರಿಸಿ ಆತ್ಮವಿಮರ್ಶೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸೋಲಿಗೆ ರಾಹುಲ್ ಅವರನ್ನು ಹೊಣೆಗಾರರನ್ನಾಗಿ ಮಾಡುವುದು ತಪ್ಪು ಎನ್ನುತ್ತಿದ್ದಾರೆ.
ಕೆಟ್ಟ ಹುಳುಗಳನ್ನು ಹೊರಹಾಕುವ ಯಜ್ಞ
ಈ ದಿಶೆಯಲ್ಲಿ ರಾಹುಲ್ ಗಾಂಧಿಯವರು ಪಕ್ಷದೊಳಗಿನ ಕೆಲ ಕೆಟ್ಟ ಹುಳುಗಳನ್ನು ಹೊರಹಾಕುವ ಮಹಾಯಜ್ಞಕ್ಕೆ ಕೈಹಾಕುವುದಲ್ಲದೆ, ಚಿಪ್ಪಿನಿಂದ ಹೊರಬಂದು ಪಕ್ಷದ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊರಬೇಕು ಎಂಬ ಕೂಗು ಒಕ್ಕೊರಲಿನಿಂದ ಎಲ್ಲ ಕೋನಗಳಿಂದಲೂ ಕೇಳಿಬರುತ್ತಿವೆ. ಇದು ರಾಹುಲ್ ಅವರ ನಾಯಕತ್ವಕ್ಕೆ ಸಿಕ್ಕ ಜಯವೂ ಹೌದು. [ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?]
ಗೋವಾ ವಿಫಲತೆ, ಗಾಯದ ಮೇಲಿನ ಬರೆ
ಎಲ್ಲಕ್ಕಿಂತ ಹೆಚ್ಚಾಗಿ ಉತ್ತರಪ್ರದೇಶದಲ್ಲಿ ಆದ ಹೀನಾಯ ಸೋಲಿಗೆ ಕಾರಣವೇನೆಂಬುದನ್ನು ಕಂಡುಕೊಳ್ಳಬೇಕಿದೆ. ಗೋವಾ ಮತ್ತು ಮಣಿಪುರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಕಾರ ರಚಿಸಲು ಸೋತಿದ್ದು ಗಾಯದ ಮೇಲೆ ಬರೆ ನೀಡಿದಂತಾಗಿದೆ. ಕಣ್ಣೆದುರಿನಲ್ಲೇ ಬಿಜೆಪಿ ಅಧಿಕಾರವನ್ನು ಕಿತ್ತುಕೊಂಡರೂ ಕಾಂಗ್ರೆಸ್ ಅಸಹಾಯಕತೆಯಿಂದ ಕೈಕಟ್ಟಿ ನಿಂತು ನೋಡುವಂತಾಗಿದ್ದು ನಿಜಕ್ಕೂ ದುರಂತದ ಸಂಗತಿ.
ಮೋದಿಗಿಂತ ಎತ್ತರಕ್ಕೆ ಬೆಳೆಯಬೇಕು
ನರೇಂದ್ರ ಮೋದಿಯಂಥ ಎತ್ತರಕ್ಕೇರುತ್ತಿರುವ ವ್ಯಕ್ತಿಯನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದಿದ್ದರೆ ರಾಹುಲ್ ಗಾಂಧಿಯವರು ಮೋದಿಗಿಂತ ಎತ್ತರಕ್ಕೆ ಬೆಳೆಯಬೇಕಾಗಿದೆ. ಇತರ ಪಕ್ಷಗಳೊಡನೆ ಮಹಾಮೈತ್ರಿ ರೂಪಿಸಬೇಕಿದ್ದರೆ ರಾಹುಲ್ ಅವರು ಇನ್ನೂ ಬಲಿಷ್ಠರಾಗಬೇಕು. ಅಲ್ಲದೆ, ಅವರ ದಾರಿ ತಪ್ಪಿಸುತ್ತಿರುವ ಕೆಲ ದುಷ್ಟಶಕ್ತಿಗಳನ್ನು ಪಕ್ಷದಿಂದ ಹೊರಹಾಕುವ ಕೆಲಸ ಮಾಡಬೇಕಿದೆ. ಇದು ಸಾಧ್ಯವೆ?[ಗಿನ್ನಿಸ್ ದಾಖಲೆ ಮಾಡುವಷ್ಟು ಚುನಾವಣೆ ಸೋತಿದ್ದಾರಾ ರಾಹುಲ್?]
ಗೋವಾಕ್ಕೆ ಹಾಲಿಡೇ ಮಾಡಲು ಬಂದರೆ?
ಗೋವಾದಲ್ಲಿ ವಿಫಲರಾದ ನಂತರ ಅಲ್ಲಿ ಉಸ್ತುವಾರಿ ವಹಿಸಿದ್ದ ದಿಗ್ವಿಜಯ್ ಸಿಂಗ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂಬ ಕೂಗು ಎದ್ದಿತ್ತು. ಕರ್ನಾಟಕದ ಉಸ್ತುವಾರಿಯನ್ನೂ ವಹಿಸಿರುವ ಅವರನ್ನು ಅಲ್ಲಿಂದಲೂ ತೊಲಗಿಸಬೇಕು ಎಂಬ ಮಾತು ಕೇಳಿಬಂದಿದೆ. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಆಡಿದ ಮಾತು ಚಾಟಿಏಟು ನೀಡಿದಂತಿದೆ. ಅವರಂದಿದ್ದು, "ಗೋವಾಕ್ಕೆ ಬರೀ ಹಾಲಿಡೇ ಮಾಡಲು ಬಂದರೆ ಹೀಗೇ ಆಗೋದು!"[ನಮಸ್ಕಾರ, ದಿಗ್ವಿಜಯ್ ಸಿಂಗ್ ಸರ್, ಹೋಗಿ ಬನ್ನಿ!]
ಯುವಪಡೆಯನ್ನು ರಾಹುಲ್ ಕಟ್ಟಬೇಕಿದೆ
ಪ್ರಶಾಂತ್ ಕಿಶೋರ್ ರಂಥ ಚಾಲಾಕಿಯಿಂದ ಚುನಾವಣಾ ಸ್ಟ್ರಾಟೆಜಿ ರೂಪಿಸಿದರೂ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿದ್ದು ಪಕ್ಷಕ್ಕೆ ಭಾರೀ ತಲೆನೋವು ತಂದಿದೆ. ರಾಹುಲ್ ಈ ನಿಟ್ಟಿನಲ್ಲಿ ಚುನಾವಣೆ ಗೆದ್ದುಕೊಡುವಂಥ, ಸರಿಮಾರ್ಗದರ್ಶನ ನೀಡುವಂಥ, ಅವರ ಚಿಂತನೆಯ ವೇಗಕ್ಕೆ ಸಾಗುವಂಥ ಯುವಪಡೆಯನ್ನು ರಾಹುಲ್ ಕಟ್ಟಬೇಕಿದೆ. ರಾಹುಲ್ ಅವರು ವಿದೇಶ ಪ್ರವಾಸದಿಂದ ತಿರುಗಿಬಂದಿದ್ದು, ಏನು ಮಾಡುತ್ತಾರೋ ಕಾದುನೋಡಬೇಕು.[ಪ್ರಶಾಂತ್ ಕಿಶೋರ್ ಅಲ್ಲೇನಾದ್ರೂ ಕಂಡ್ರೆ ಹೇಳಿ, ಐದು ಲಕ್ಷ ಕೊಡ್ತೀವಿ]