ರಾಹುಲ್ ಒಬ್ಬ ಪಾರ್ಟ್ ಟೈಮ್ ರಾಜಕಾರಣಿ: ಕೃಷ್ಣ ವ್ಯಂಗ್ಯ
ರಾಜಕಾರಣವನ್ನು ಪಾರ್ಟ್ ಟೈಮ್ ಕೆಲಸ ಎಂದುಕೊಂಡರೆ ಅದರ ಬಗ್ಗೆ ಗಂಭೀರತೆ ಉಳಿಯುವುದಿಲ್ಲ. ಇಂದು ಕಾಂಗ್ರೆಸ್ ಬಹುಪಾಲು ಚುನಾವಣೆಗಳಲ್ಲಿ ಸೋಲುವುದಕ್ಕೂ ರಾಹುಲ್ ಗಾಂಧಿಯವರ ಈ ಮನಸ್ಥಿತಿಯೇ ಕಾರಣ ಎಂದು ವ್ಯಂಗ್ಯವಾಗಿ ಕೃಷ್ಣ ದೂರಿದ್ದಾರೆ.
ನವದೆಹಲಿ, ಮಾರ್ಚ್ 23: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಪಾರ್ಟ್ ಟೈಮ್ ರಾಜಕಾರಣಿ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ. ನಿನ್ನೆ(ಮಾರ್ಚ್ 22) ತಾನೇ ಅಧಿಕೃತವಾಗಿ ಬಿಜೆಪಿ ಸೇರಿದ ಅವರು ಇಂದು ಕಾಂಗ್ರೆಸ್ ನಾಯಕರ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. [ಮೋದಿಯಿಂದಾಗಿ ವಿಶ್ವದಲ್ಲಿ ಭಾರತದ ಹೆಗ್ಗುರುತು: ಕೃಷ್ಣ ]
ರಾಜಕಾರಣವನ್ನು ಪಾರ್ಟ್ ಟೈಮ್ ಕೆಲಸ ಎಂದುಕೊಂಡರೆ ಅದರ ಬಗ್ಗೆ ಗಂಭೀರತೆ ಉಳಿಯುವುದಿಲ್ಲ. ಇಂದು ಕಾಂಗ್ರೆಸ್ ಬಹುಪಾಲು ಚುನಾವಣೆಗಳಲ್ಲಿ ಸೋಲುವುದಕ್ಕೂ ರಾಹುಲ್ ಗಾಂಧಿಯವರ ಈ ಮನಸ್ಥಿತಿಯೇ ಕಾರಣ ಎಂದು ವ್ಯಂಗ್ಯವಾಗಿ ದೂರಿದ್ದಾರೆ. [ಎಸ್ಎಂ ಕೃಷ್ಣ ಬಿಜೆಪಿ ಸೇರಿದರೆ ಆಗುವ ಲಾಭನಷ್ಟಗಳೇನು?]
ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಗಂಭೀರತೆಯಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಿಂದ ಬದಲಾವಣೆಯಾಗಬೇಕಿದೆ. ಆದರೆ ಈ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರೂ ಗಂಭೀರವಾಗಿ ಯೋಚಿಸುತ್ತಿಲ್ಲ ಎಂದು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಕೃಷ್ಣ ಹೇಳಿದ್ದಾರೆ. [ಎಸ್.ಎಂ. ಕೃಷ್ಣ ಅಧಿಕೃತವಾಗಿ ಬಿಜೆಪಿ ಸೇರ್ಪಡೆ]
ಇಂದು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಮಾತನಾಡುತ್ತಿದ್ದ 84 ವರ್ಷದ ಕೃಷ್ಣ ' ನಾನು ಕಾಂಗ್ರೆಸ್ಸಿನಿಂದ ಯಾವ ಹುದ್ದೆಯನ್ನೂ ನಿರೀಕ್ಷಿಸಿರಲಿಲ್ಲ. ನನಗೆ ಕೇವಲ ಗೌರವ ನೀಡಿದರೆ ಸಾಕಿತ್ತು, ಆದರೆ ಅದನ್ನೂ ಕಾಂಗ್ರೆಸ್ಸಿಗರು ಮಾಡಲಿಲ್ಲ.
ನನ್ನನ್ನು ಮೂಲೆಗುಂಪು ಮಾಡಿ, ಅಗೌರವ ತೋರಿದರು. ಅದಕ್ಕೆಂದೇ ಪಕ್ಷ ತೊರೆಯುವ ನಿರ್ಧಾರ ಮಾಡಿದೆ' ಎಂದು ಕಾಂಗ್ರೆಸ್ ನಾಯಕರ ಬಗೆಗಿನ ತಮ್ಮ ಅಸಮಾಧಾನವನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡರು. [ಎಸ್ಎಂ ಕೃಷ್ಣ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ: ಅಮಿತ್ ಶಾ]
ನನಗೆ ಪ್ರಧಾನಿ ಮೋದಿಜೀಯವರ ಭ್ರಷ್ಟಾಚಾರ ಮುಕ್ತ ಭಾರತದ ಕಲ್ಪನೆ ಇಷ್ಟವಾಯಿತು, ಅಲ್ಲದೆ, ಅಮಾನ್ಯೀಕರಣದ ಅವರ ನಿಲುವಿಗೂ ನನ್ನ ಬೆಂಬಲವಿದೆ. ಅವರ ಇಂಥ ನಡೆಗಳೇ ನನಗೆ ಬಿಜೆಪಿಯನ್ನು ಸೇರುವುದಕ್ಕೆ ಅನುವು ಮಾಡಿಕೊಟ್ಟಿತು ಎಂದು ಮೋದಿಯವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.