ಸುಭಾಷ್ ಚಂದ್ರ ಬೋಸ್ ರನ್ನು ಪ್ರಣಬ್ ಮುಖರ್ಜಿ ಭೇಟಿಯಾಗಿದ್ದರೆ?
ನವದೆಹಲಿ, ಅಕ್ಟೋಬರ್, 27: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಎಂದು ಭಾವಿಸುತ್ತಿರುವ ಗುಮ್ನಾಮೀ ಬಾಬಾ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭೇಟಿಯಾಗಿದ್ದರೆ ಎಂಬ ಊಹಾಪೋಹಗಳು ಈಗ ದೇಶದಾದ್ಯಂತ ಹರಿದಾಡುತ್ತಿವೆ.
ಸ್ವಾಂತಂತ್ರ್ಯ ನಂತರವೂ ಸಹ ನೇತಾಜಿಯವರು ಬದುಕಿದ್ದರು ಮತ್ತು ಗುಮ್ನಾಮಿ ಬಾಬಾ ಎಂಬ ಹೆಸರಲ್ಲಿ ಸಂಚರಿಸುತ್ತಿದ್ದರು ಎಂಬ ಚರ್ಚೆಗಳು ಹಲವು ವರ್ಷಗಳಿಂದ ನಮ್ಮ ದೇಶದಲ್ಲಿ ಇವೆ.
1980ರಲ್ಲಿ ಕಾಂಗ್ರೆಸ್ ನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಣಬ್ ಮುಖರ್ಜಿಯವರು ಗುಮ್ನಾಮೀ ಬಾಬಾ ಅವರನ್ನು ಫೈಜಾಬಾದ್ ನಲ್ಲಿ ಭೇಟಿಯಾಗಿದ್ದರು ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ಸುಭಾಷ್ ಚಂದ್ರಬೋಸ್ ಅವರು 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮರಣಿಸದ್ದಾರೆ ಎಂದು ಹಲವು ಮಂದಿ ಭಾವಿಸಿದ್ದರೂ ಸಹ ಅದು ನಿಜವಲ್ಲ 1980ರ ವರೆಗೂ ಗುಮ್ನಾಮೀ ಬಾಬಾ ಎಂಬ ಹೆಸರಲ್ಲಿ ಬೋಸ್ ಅವರು ಬದುಕಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ.
ಪ್ರಣಬ್ ಮುಖರ್ಜಿಯವರು ಗುಮ್ನಾಮೀ ಬಾಬಾ ಅವರನ್ನು 1980ರಲ್ಲಿ ಭೇಟಿಯಾಗಿದ್ದರು ಎಂಬ ಸುದ್ದಿಯನ್ನು ಆಂಗ್ಲ ದಿನಪತ್ರಿಕೆಯೊಂದು ಪ್ರಕಟಿಸಿದೆ. ರವೀಂದ್ರ ಶುಕ್ಲಾ ಎಂಬುವವರು ಮಂಗಳವಾರ ಈ ವಿಷಯ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಗುಫ್ತಾರ್ ಘಾಟ್ ಗಳಲ್ಲಿ ನಡೆದ ಗುಮ್ನಾಮೀ ಬಾಬಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 13ಮಂದಿ ವ್ಯಕ್ತಿಗಳ ಪೈಕಿ ರವೀಂದ್ರ ಶುಕ್ಲಾ ಸಹ ಒಬ್ಬರು ಎಂದು ಹೇಳಲಾಗಿದೆ.
1981-82ರ ಮಧ್ಯ ಸಮಯದಲ್ಲಿ ಗುಮ್ನಾಮೀ ಬಾಬಾ ಅವರು " ಬೆಂಗಾಲ್ ನಿಂದ ಓರ್ವ ಸಜ್ಜನ ವ್ಯಕ್ತಿ ಬಂದಿದ್ದಾರೆ ಅವರೊಂದಿಗೆ ಮಾರುಕಟ್ಟೆ ವರೆಗೂ ಜೊತೆಯಾಗಿ ಹೋಗು" ಎಂದು ನನಗೆ ತಿಳಿಸಿದ್ದರು. ಆ ವ್ಯಕ್ತಿ ಅಯೋಧ್ಯೆಗೆ ಸೇರಿದ ಬಿರ್ಲಾ ದರ್ಮಶಾಲೆಯಲ್ಲಿ ಉಳಿದುಕೊಂಡಿದ್ದರು.
"ನನ್ನ ಬೈಕ್ ನಲ್ಲೇ ಅವರನ್ನು ಕೂರಿಸಿಕೊಂಡು ಫೈಜಾಬಾದ್ ಚೌಕ್ ವರೆಗೂ ಕರೆದುಕೊಂಡು ಹೋಗಿದ್ದೇ ಅವರನ್ನು ಈಗಲೂ ನಾನು ಗುರುತಿಸಬಲ್ಲೇ ಅವರು ಇಂದು ದೇಶದ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಬೇರಾರೂ ಅಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೇ" ಎಂದು ರವೀಂದ್ರ ಶುಕ್ಲಾ ಪತ್ರಿಕೆಗೆ ತಿಳಿಸಿದ್ದಾರೆ.
ಗುಮ್ನಾಮೀ ಬಾಬ ಅವರ ಆಶೀರ್ವಾದ ಪಡೆದಿದ್ದೇನೆ. ಪಾದ ಮುಟ್ಟಿ ನಮಸ್ಕರಿಸಿದ್ದೇನೆ. ಬಾಬಾ ಅವರಿಗೂ ಚಂದ್ರಬೋಸ್ ಅವರಿಗೂ ತೀರಾ ಹೋಲಿಕೆ ಇತ್ತು. ರೂಪದಲ್ಲಿ ಸಾಮ್ಯತೆ ಇತ್ತು ಎಂದು ಶುಕ್ಲಾ ತಿಳಿಸಿದ್ದಾರೆ.